ಮಲೆನಾಡು ಜನತೆಯ ಬಹುವರ್ಷಗಳ ಕನಸು ಶಿವಮೊಗ್ಗ ವಿಮಾನ ನಿಲ್ದಾಣ ಕೊನೆಗೂ ಸೇವೆಗೆ ಸಿದ್ಧವಾಗಿದ್ದು, ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವ ಕುರಿತು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಬೆಂಗಳೂರು: ಮಲೆನಾಡು ಜನತೆಯ ಬಹುವರ್ಷಗಳ ಕನಸು ಶಿವಮೊಗ್ಗ ವಿಮಾನ ನಿಲ್ದಾಣ ಕೊನೆಗೂ ಸೇವೆಗೆ ಸಿದ್ಧವಾಗಿದ್ದು, ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವ ಕುರಿತು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹೌದು.. ಶಿವಮೊಗ್ಗದಲ್ಲಿ ಕೊನೆಗೂ ವಿಮಾನ ಹಾರಾಟಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಶಿವಮೊಗ್ಗ ವಿಮಾನ ನಿಲ್ದಾಣದ (Shimoga Airport) ಉದ್ಘಾಟನೆ ಮಾಡಲಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 27ಕ್ಕೆ ಪ್ರಧಾನಿ ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ: ಬಿಎಸ್ವೈ
ಅಂತೆಯೇ ನಿಲ್ದಾಣಕ್ಕೆ ಹೆಸರಿಡುವ ಕುರಿತು ಎದ್ದಿದ್ದ ಗೊಂದಲ ಕೂಡ ಪರಿಹಾರವಾಗಿದ್ದು, ರಾಷ್ಟ್ರಕವಿ ಕುವೆಂಪು ಹೆಸರಿಡಲು ಖುದ್ದು ಸಿಎಂ ಬೊಮ್ಮಾಯಿ(Basavaraj Bommai) ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಒಪ್ಪಿಗೆ ಪಡೆದಿದ್ದು, ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದ್ದಾರೆ. ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿದ್ದರು.
ಬಿಎಸ್ ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆದಾಗ ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ ಏರ್ ಪೋರ್ಟ್ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಶಿವಮೊಗ್ಗ ಏರ್ ಪೋರ್ಟ್ ಕಾಮಗಾರಿಯು ಸ್ಥಗಿತಗೊಂಡಿತ್ತು. ಮತ್ತೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ನೆನಗುದಿಗೆ ಬಿದ್ದಿದ್ದ ಏರ್ ಪೋರ್ಟ್ ಕಾಮಗಾರಿಗೆ ಮರುಚಾಲನೆ ಕೊಟ್ಟಿದ್ದರು.