ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಪ್ರಚಾರ ತಾರಕಕ್ಕೇರಿದ್ದು, ಇಲ್ಲೊಬ್ಬ ನಾಯಕ ಮತದಾರರಿಗೆ ಸೈಟು ನೀಡುವ ಭರವಸೆ ನೀಡಿದ್ದಾರೆ. ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಪ್ರಚಾರ ತಾರಕಕ್ಕೇರಿದ್ದು, ಇಲ್ಲೊಬ್ಬ ನಾಯಕ ಮತದಾರರಿಗೆ ಸೈಟು ನೀಡುವ ಭರವಸೆ ನೀಡಿದ್ದಾರೆ.
ಹೌದು… ವೋಟಿಗಾಗಿ ನೋಟು ಎಲ್ಲ ಚುನಾವಣೆಗಳಲ್ಲೂ ಸಾಮಾನ್ಯ.. ಈಗಾಗಲೇ ಕುಕ್ಕರ್, ಸೀರೆ, ಹಣ, ಬಾಡೂಟದ ಪಾಲಿಟಿಕ್ಸ್ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಟಿಕೆಟ್ ಆಕಾಂಕ್ಷಿ ಮತದಾರರಿಗೆ ಸೈಟುಗಳನ್ನು ನೀಡಿ ಓಲೈಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕಾಸ್ಟ್ಲಿ ಗಿಫ್ಟ್ ನೀಡಲು ಬಿಜೆಪಿ (BJP) ಸಂಭಾವ್ಯ ಅಭ್ಯರ್ಥಿ ಮುಂದಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಬಿಜೆಪಿಯ ಗೇಮ್ ಪ್ಲಾನ್ ನಲ್ಲಿ ಜಾತಿ ಸಮೀಕರಣವೇ ಪ್ರಧಾನ
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Parajadwani Yatre) ನಡೆಯುತ್ತಿದ್ದರೆ. ಅತ್ತ ಫ್ರೀ ಸೈಟ್ (Free Site) ನೀಡಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಮುಂದಾಗಿದ್ದಾರೆ. ಮಾಗಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಸಾದ್ ಗೌಡ (Prasad Gowda) ಹೀಗೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, 1 ಸಾವಿರ ಮಹಿಳೆಯರಿಗೆ ಉಚಿತವಾಗಿ 15*20 ಅಳತೆ ಸೈಟುಗಳನ್ನು ನೀಡಲು ಸಿದ್ಧತೆ ನಡೆಸಿದ್ದಾರೆ. ಬಿಡದಿ ಹೋಬಳಿಯಲ್ಲಿ 6 ಎಕರೆ ಜಾಗದಲ್ಲಿ ಫ್ರೀ ಸೈಟ್ ನೀಡಲು ಪ್ರಸಾದ್ ಗೌಡ ತೀರ್ಮಾನಿಸಿದ್ದಾರೆ.
ಸೈಟ್ ಹಂಚಿಕೆಯಲ್ಲಿ ಅಂಗವಿಕಲರು, ವಿಧವೆಯರು ಮತ್ತು ಅನಾಥರಿಗೆ ಮೊದಲ ಆದ್ಯತೆ ನೀಡುವುದಾಗಿ ಪ್ರಸಾದ್ ಗೌಡ ತಿಳಿಸಿದ್ದು, ಜಮೀನು ಅಥವಾ ನಿವೇಶನ ಇಲ್ಲದವರ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮಾಹಿತಿ ಸಂಗ್ರಹಿಸಿ ಸೈಟ್ ಹಂಚಿಕೆಗೆ ಸಿದ್ಧತೆ ನಡೆಸಿದ್ದಾರೆ. ಈ ಯೋಜನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕರೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಂಚನಬೆಲೆ ಬಳಿ ಇರುವ ತಮ್ಮದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ಒಟ್ಟು 3 ಸಾವಿರ ಕುಟುಂಬಗಳಿಗೆ ನಿವೇಶನ ಹಂಚುವುದಾಗಿ ಘೋಷಿಸಿದ್ದಾರೆ.
ಈ ಕುರಿತ ಬಿತ್ತಿಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.