ಖ್ಯಾತ ಹಿರಿಯ ಪತ್ರಕರ್ತ ಮತ್ತು ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ. ಸತ್ಯನಾರಾಯಣ ಭಾನುವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು: ಖ್ಯಾತ ಹಿರಿಯ ಪತ್ರಕರ್ತ ಮತ್ತು ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ. ಸತ್ಯನಾರಾಯಣ ಭಾನುವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ್ದ ಸತ್ಯನಾರಾಯಣ ಅವರು, ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು. ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ಸತ್ಯ ನಾರಾಯಣ ಅವರು ತಮ್ಮ ಅಂಕಣಗಳ ಮೂಲಕ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಿದ್ದ ಅವರು, ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿಟ್ಟುಕೊಂಡಿದ್ದರು. ಬೆಂಗಳೂರಿನ ಜಯನಗರದ ಎಲ್ಐಸಿ ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಆರು ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ
ಸತ್ಯ ನಾರಾಯಣ ಅವರು ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆ ಪ್ರತಿಷ್ಠಿತ ಸುದ್ದಿ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದರು ಮತ್ತು ಕನ್ನಡ ಪ್ರಭದಲ್ಲಿ ಅವರ ಜನಪ್ರಿಯ ಅಂಕಣಗಳಾದ ‘ನಗರಪ್ರದಕ್ಷಿಣೆ’ ಮತ್ತು ‘ವ್ಯಕ್ತಿ ವಿಚಾರ’ ಮೂಲಕ ಸಾಕಷ್ಟು ಗಮನ ಮತ್ತು ಜನಪ್ರಿಯತೆಯನ್ನು ಗಳಿಸಿದರು. ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲಿ ಸರಳ ಶೈಲಿಯಲ್ಲಿ ಬರೆಯುತ್ತಿದ್ದರು. ಅವರು ಹಣಕಾಸು, ವ್ಯವಹಾರ ಮತ್ತು ಬಜೆಟ್ ವರದಿಗಾರಿಕೆಯಲ್ಲಿ ಪರಿಣತರಾಗಿದ್ದರು.
ಅವರ ನಿವಾಸದಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಮೃತರು ಪತ್ನಿ ವೆಂಕಮ್ಮ ಹಾಗೂ ಪುತ್ರಿ ಅಪೂರ್ವ ಅವರನ್ನು ಅಗಲಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.