ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅರ್ಕಾವತಿ ಲೇಔಟ್ನಲ್ಲಿ ಇದುವರೆಗೆ ಸ್ವಾಧೀನಪಡಿಸಿಕೊಳ್ಳದ 20 ಗುಂಟೆ ಭೂಮಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 26 ನಿವೇಶನಗಳನ್ನು ಮಂಜೂರು ಮಾಡಿದೆ ಎಂದು ತಿಳಿದ ನಂತರ ಕೃಷಿಕರೊಬ್ಬರು ಗೊಂದಲಕ್ಕೊಳಗಾಗಿದ್ದಾರೆ. ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅರ್ಕಾವತಿ ಲೇಔಟ್ನಲ್ಲಿ ಇದುವರೆಗೆ ಸ್ವಾಧೀನಪಡಿಸಿಕೊಳ್ಳದ 20 ಗುಂಟೆ ಭೂಮಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 26 ನಿವೇಶನಗಳನ್ನು ಮಂಜೂರು ಮಾಡಿದೆ ಎಂದು ತಿಳಿದ ನಂತರ ಕೃಷಿಕರೊಬ್ಬರು ಗೊಂದಲಕ್ಕೊಳಗಾಗಿದ್ದಾರೆ. ಇದೀಗ ಜಮೀನು ಮಾಲೀಕರು ಬಿಡಿಎಗೆ ತಮ್ಮ ಜಮೀನು ವಾಪಸ್ ನೀಡುವಂತೆ ಪದೇ ಪದೆ ಮನವಿ ಮಾಡುತ್ತಿದ್ದಾರೆ.
ಆಸ್ತಿಯು ಮೋಹನ್ ರೆಡ್ಡಿ ಎಂಬುವವರ ಕುಟುಂಬಕ್ಕೆ ಸೇರಿದ್ದು. ಟಿಎನ್ಎಸ್ಇಯೊಂದಿಗೆ ಮಾತನಾಡಿದ ರೆಡ್ಡಿ, ‘ಕೆಆರ್ ಪುರಂ ಹೋಬಳಿಯ ಚೇಳೇಕೆರೆಯಲ್ಲಿ ನನ್ನ ಬಳಿ 30 ಗುಂಟೆ (ಸೈಟ್ ನಂ. 128/1) ಜಮೀನು ಇದೆ. ಅದರಲ್ಲಿ 10 ಗುಂಟೆಯನ್ನು ರಸ್ತೆ ಮತ್ತು ಚರಂಡಿ ಅಗಲೀಕರಣಕ್ಕಾಗಿ ಸೂಚಿಸಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪರಿಹಾರವನ್ನೂ ಘೋಷಿಸಲಾಗಿತ್ತು. ಪ್ರಾಥಮಿಕ ಅಥವಾ ಅಂತಿಮ ಅಧಿಸೂಚನೆಯಲ್ಲಿ ಉಳಿದ 20 ಗುಂಟೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮಂಜೂರು ಮಾಡಿದವರು ತಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರ ನನಗೆ ತಿಳಿಯಿತು. ಸೈಟ್ ಸಂಖ್ಯೆ 968 ರಿಂದ 994, ಎಲ್ಲಾ 20×30 ಚದರ ಅಡಿ ಆಯಾಮಗಳನ್ನು ಈಗ ಹಂಚಲಾಗಿದೆ’ ಎಂದರು.
ರೆಡ್ಡಿ ಅವರು ಬಿಡಿಎ ಆಯುಕ್ತರಿಗೆ 2021ರ ಡಿಸೆಂಬರ್ 22 ಮತ್ತು 2022ರ ಡಿಸೆಂಬರ್ 23 ರಂದು ಪತ್ರಗಳನ್ನು ಬರೆದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಈ ವರ್ಷದ ಜನವರಿಯಲ್ಲಿ, ಮಂಜೂರಾತಿದಾರರೊಬ್ಬರು ಅವರಿಗೆ ಮೀಸಲಿಟ್ಟ ಸ್ಥಳದಲ್ಲಿ ಮನೆ ನಿರ್ಮಿಸಲು ಮುಂದಾದರು. ನನ್ನ ಆಸ್ತಿಗೆ ಅಡ್ಡಿಪಡಿಸುವುದನ್ನು ತಡೆಯುವಂತೆ ನಾನು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಡಿಎ ಅನುಮೋದಿತ ಲೇಔಟ್ನಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಮಾಜಿ ಕಾರ್ಪೊರೇಟರ್ ಬಂಧನ
ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯೊಬ್ಬರು ಬಿಡಿಎ ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ಇದು ತಪ್ಪಾಗಿತ್ತು. ಈ ಹಂಚಿಕೆಯು 2014 ಮತ್ತು 2018 ರ ನಡುವೆ ಯಾವುದೋ ಸಮಯದಲ್ಲಿ ನಡೆದಿದೆ. ಇದು ಭೂಸ್ವಾಧೀನ ಮತ್ತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ತಪ್ಪಾಗಿದೆ. ತನಿಖೆಯಿಂದ ಯಾರು ತಪ್ಪಿತಸ್ಥರು ಎಂಬುದು ಬೆಳಕಿಗೆ ಬರಲಿದೆ ಎಂದರು.
ಪರಿಹಾರದ ಬಗ್ಗೆ ಕೇಳಿದಾಗ, ‘ಈಗ ಮಂಜೂರು ಮಾಡಿದ ಭೂಮಿಯನ್ನು ನಾವು ಹಿಂಪಡೆಯಲು ಸಾಧ್ಯವಿಲ್ಲ. ಈ ಜಮೀನಿನ ಮೌಲ್ಯ ಈಗ ಸುಮಾರು 15 ಕೋಟಿ ರೂ. ಆಗಿದೆ. ಅವರು ಆಯುಕ್ತರಿಗೆ ಮನವಿ ಮಾಡಿದರೆ ಮತ್ತು ಆಡಳಿತ ಮಂಡಳಿ ಒಪ್ಪಿಗೆ ನೀಡಿದರೆ ಅದೇ ಬಡಾವಣೆಯಲ್ಲಿ ಅಭಿವೃದ್ಧಿ ಪಡಿಸಿದ ಶೇ.50ರಷ್ಟು ಭೂಮಿಯನ್ನು ಪಡೆಯುವುದೇ ಅವರಿಗಿರುವ ಪರಿಹಾರವಾಗಿದೆ ಎಂದು ಹೇಳಿದರು.
ಆದರೆ, ಈ ಪ್ರಸ್ತಾವಿತ ಒಪ್ಪಂದದಿಂದ ರೆಡ್ಡಿ ಅತೃಪ್ತರಾಗಿದ್ದಾರೆ. ‘ಬಿಡಿಎ ನೀಡುವ ಶೇ 50ರಷ್ಟು ಭೂಮಿಯನ್ನು ಸ್ವೀಕರಿಸಲು ರೈತರು ಭಿಕ್ಷುಕರಲ್ಲ. ನನಗೆ ಯಾವುದೇ ಅಭಿವೃದ್ಧಿ ಹೊಂದಿದ ಭೂಮಿ ಬೇಡ. ನನಗೆ ನನ್ನ ಪೂರ್ವಜರ ಆಸ್ತಿ ಮಾತ್ರ ಬೇಕು’ ಎಂದು ಅಳಲು ತೋಡಿಕೊಳ್ಳುತ್ತಾರೆ.
ಭೂಸ್ವಾಧೀನ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಈ ಸಂಬಂಧ ಹೆಚ್ಚಿನ ವಿವರಗಳನ್ನು ಪಡೆದ ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
‘ಸ್ವಾಧೀನಪಡಿಸಿಕೊಳ್ಳುವ ನೆಪದಲ್ಲಿ ರೈತರಿಂದ ಕಬಳಿಸಿದ ಜಮೀನಿನ ಫಲಾನುಭವಿಗಳ ವಿವರ ನೀಡುವಂತೆ ರೆಡ್ಡಿ ಆಗ್ರಹಿಸಿದರು. ‘ಪ್ರಾಥಮಿಕ ಅಧಿಸೂಚನೆಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಸೂಚಿಸಲಾದ 3,339 ಎಕರೆಗಳ ಪೈಕಿ ಅಂತಿಮ ಅಧಿಸೂಚನೆಯ ಮೂಲಕ 1,766 ಎಕರೆಗಳನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಲ್ಲಿ 600 ಎಕರೆಯನ್ನು ಮಾತ್ರ ಬಡಾವಣೆಗೆ ಬಳಸಿಕೊಳ್ಳಲಾಗಿದೆ. ಉಳಿದದ್ದು ಏನಾಯಿತು ಮತ್ತು ಫಲಾನುಭವಿಗಳು ಯಾರು? ವಿವರಗಳನ್ನು ತಿಳಿಯಲು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಾನು ಯೋಜಿಸುತ್ತಿದ್ದೇನೆ ಎಂದು ರೆಡ್ಡಿ ಹೇಳಿದರು.