ಆ ಜಿಲ್ಲೆ ಅದೊಂದು ಬೆಳೆಗೆ ಫೇಮಸ್. ಆ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲವೆಂದು ಆ ಜಿಲ್ಲೆಯ ರೈತರು ಪರದಾಡುತ್ತಿದ್ದರು. ಅಷ್ಟೇ ಅಲ್ಲದೆ ಬೆಳೆ ಮಾರಾಟದ ಹಣ ಸಹಾ ಸರಿಯಾಗಿ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಮಾರುಕಟ್ಟೆಯನ್ನ ಬಂದ್ ಮಾಡಿ ಪ್ರತಿಭಟನೆ ಕೂಡ ಮಾಡಿದ್ದರು. ಆದರೆ ಇದೀಗ ರೈತರಿಗೆ ಬಂಪರ್ ಬೆಲೆ (bumper income) ಸಿಗುತ್ತಿದ್ದು, ರೈತರು ಫುಲ್ ಖುಷ್ ಆಗಿದ್ದಾರೆ. ಈ ಕುರಿತು ಒಂದು ವರದಿ.
ಹೌದು ಅತಿವೃಷ್ಟಿ ಹಾಗೂ ಚಳಿಯಿಂದಾಗಿ ರೇಷ್ಮೆಗೂಡಿನ ಉತ್ಪಾದನೆ ಕುಂಠಿತವಾಗಿದ್ದು, ಇದರಿಂದಾಗಿ ರೇಷ್ಮೆಗೂಡಿನ ಧಾರಣೆ ಏರುತ್ತಿದೆ. ಏಷ್ಯಾದಲ್ಲಿಯೇ ಅತಿದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆಯ ಖ್ಯಾತಿಯ ರಾಮನಗರ ಮಾರುಕಟ್ಟೆಗೆ (Government Cocoon Market Ramanagara) 290 ಲಾಟ್ ನಷ್ಟು ದ್ವಿದಳಿ ಗೂಡು ಅವಕವಾಗಿದ್ದು, ಕೆಜಿಗೆ 865 ರೂ ದರದಲ್ಲಿ ಹರಾಜು ನಡೆದಿದೆ. ಅಂತೆಯೇ 124 ಲಾಟ್ ಮಿಶ್ರತಳಿ ಗೂಡು ಬಂದಿದ್ದು, ಸರಾಸರಿ 680 ರಂತೆ ಮಾರಾಟವಾಗಿದೆ.
ಅಂದಹಾಗೆ ಕಳೆದ ಎರಡು ವರ್ಷಗಳಿಂದ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗುತ್ತಿದೆ. ರಾಮನಗರ ಮಾರುಕಟ್ಟೆಯಲ್ಲೆ ಸುಮಾರು 86 ಸಾವಿರ ರೈತರು ನೊಂದಾಯಿಸಿಕೊಂಡಿದ್ದಾರೆ. ಅಲ್ಲದೆ ಬೇರೆ ಜಿಲ್ಲೆಗಳು ಹೊರರಾಜ್ಯಗಳಿಂದಲೂ ಗೂಡು ಬರುತ್ತದೆ. ಇನ್ನು ಇತ್ತೀಚಿಗೆ ಸುರಿದ ಧಾರಕಾರ ಮಳೆಯಿಂದಾಗಿ ರೇಷ್ಮೆ ಕೃಷಿಗೂ ಹೊಡೆತ ಬಿದ್ದಿತ್ತು. ಹಿಪ್ಪುನೇರಳೆ ಗಿಡಗಳಿಗೆ ಹಾನಿಯಾಗಿತ್ತು. ಈ ಮಧ್ಯೆ ಇದೀಗ ಚಳಿ ಕೂಡ ಆರಂಭವಾಗಿದ್ದು, ಸಹಜವಾಗಿಯೇ ಗೂಡು ಉತ್ಪಾದನೆ ಕುಸಿತ ಕಾಣುತ್ತಿದೆ. ಆದರೆ ರೈತರಿಗೆ ಮಾತ್ರ ಉತ್ತಮ ಬೆಲೆ ಸಿಗುತ್ತಿದೆ ಎನ್ನುತ್ತಾರೆ ರೇಷ್ಮೆ ಬೆಳೆಗಾರ ನೀಲಕಂಠ.
ರಾಮನಗರದ ರೇಷ್ಮೆಗೂಡು ಮಾರುಕಟ್ಟೆ -ಸಂಪೂರ್ಣ ನಗದು ರಹಿತ ಮಾರುಕಟ್ಟೆ:
ಅಂದಹಾಗೆ ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಮಾರುಕಟ್ಟೆ. ರಾಮನಗರ ಜಿಲ್ಲೆಯ ಸ್ಥಳೀಯ ರೈತರು ಜೊತೆಗೆ ಬೇರೆ ಬೇರೆ ಜಿಲ್ಲೆಗಳು ಹಾಗೂ ತಮಿಳುನಾಡು, ಆಂಧ್ರಪ್ರದೇದ, ತೆಲಂಗಾಣದಿಂದಲೂ ರೈತರು ಇಲ್ಲಿಗೆ ಗೂಡು ತಂದು ಮಾರಾಟ ಮಾಡುತ್ತಾರೆ. ಪ್ರತಿನಿತ್ಯ 40ರಿಂದ 45 ಟನ್ ಗೂಡು ಮಾರಾಟವಾಗುತ್ತಿದೆ. ಸರಾಸರಿ ಎರಡದಿಂದ ಎರಡೂವರೆ ಕೋಟಿ ರೂ ವ್ಯವಹಾರ ನಡೆಯುತ್ತಿದೆ.
ಆದರೆ ಇಂತಹ ಮಾರುಕಟ್ಟೆಯಲ್ಲಿ ರೈತರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಮಾರಾಟ ಮಾಡಿದ ಗೂಡಿಗೆ ಹಣವೇ ಸರಿಯಾಗಿ ಸಿಗುತ್ತಿರಿಲ್ಲ. ದಲ್ಲಾಳಿಗಳು ಅಧಿಕಾರಿಗಳು ಸೇರಿ ತಿಂಗಳುಗಟ್ಟಲೆ ಸತಾಯಿಸುತ್ತಿದ್ದರು. ಆದರೆ ಇದೀಗ ಮಾರುಕಟ್ಟೆ ಸಂಪೂರ್ಣ ನಗದು ರಹಿತ ಮಾರುಕಟ್ಟೆಯಾಗಿದ್ದು, ಇಂದು ರೈತರು ಕೂಡ ಮಾರಾಟ ಮಾಡಿದ್ರೆ, ನಾಳೆ ಅವರ ಅಕೌಂಟ್ ಗೆ ಹಣ ಜಮಾವಣೆ ಆಗುತ್ತದೆ. ಮೊದಲೇ ರೈತರ ಅಕೌಂಟ್ ನಂಬರ್ ಪಡೆದು ದಾಖಲು ಮಾಡಿಕೊಂಡಿರೋ ಅಧಿಕಾರಿಗಳು ಅವರ ಖಾತೆಗೆ ಆನ್ ಲೈನ್ ಕೂಡ ಹಣ ಪಾವತಿಯಾಗುತ್ತದೆ. ಇದರಿಂದ ರೈತರು ಕೂಡ ನಿರಾಳರಾಗಿದ್ದಾರೆ ಎಂದು ರೇಷ್ಮೆಉಪನಿರ್ದೇಶಕ ಸಿ ಡಿ ಬಸವರಾಜು ತಿಳಿಸಿದ್ದಾರೆ.
ಒಟ್ಟಾರೆ ರಾಮನಗರ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಇದೀಗ ರೇಷ್ಮೆಗೂಡಿಗೆ ಒಳ್ಳೆಯ ಧಾರಣೆ ಸಿಗುತ್ತಿದೆ. ಇದರಿಂದ ರೈತರು ಕೂಡ ದಿಲ್ ಖುಷ್ ಆಗಿದ್ದಾರೆ. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ)
