ನವದೆಹಲಿ: ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಸಜ್ಜಾಗಿದೆ. ಇದು ಢಾಕಾ-ನವದೆಹಲಿ ಸಂಬಂಧಗಳಲ್ಲಿ ಹದಗೆಟ್ಟ ಹಂತದ ನಂತರ ಸಂಬಂಧಗಳನ್ನು ಪುನಃಸ್ಥಾಪಿಸುವ ಪ್ರಯತ್ನವನ್ನು ಸೂಚಿಸುತ್ತದೆ. 13ನೇ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ ಬಿಎನ್ಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರೆಹಮಾನ್ ಅವರ ವಿದೇಶಾಂಗ ನೀತಿ ಸಲಹೆಗಾರ ಹುಮಾಯೂನ್ ಕಬೀರ್, ಮುಂಬರುವ ಸರ್ಕಾರಕ್ಕೆ ಬಾಂಗ್ಲಾದೇಶದ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಿದೆ. ತಾರಿಕ್ ರೆಹಮಾನ್ ಅವರ ವಿದೇಶಾಂಗ ನೀತಿಯ ಪ್ರಮುಖ ಭಾಗವೆಂದರೆ ಬಾಂಗ್ಲಾದೇಶವನ್ನು ಪ್ರಭಾವಶಾಲಿಯನ್ನಾಗಿ ಮಾಡುವುದು ಎಂದು ಕಬೀರ್ ಹೇಳಿದರು. ಮೋದಿಗೆ ಆಹ್ವಾನವನ್ನು ‘ಸದ್ಭಾವನೆಯ ಸೂಚಕ’ ಎಂದು ಹೇಳಿದರು. ನವದೆಹಲಿಯೊಂದಿಗೆ ನಿಕಟ ಸಂಬಂಧವನ್ನು ಉಳಿಸಿಕೊಂಡಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟಿತ್ತು. ಆ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶಗಳ ನಂತರ ಮೋದಿ ಅವರೇ ಖುದ್ಧು ರೆಹಮಾನ್ ಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದರು. ಎರಡೂ ದೇಶಗಳ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ಬಾಂಗ್ಲಾದೇಶ ಚುನಾವಣೆ ಗೆದ್ದ ನಂತರ BNP ಅಧ್ಯಕ್ಷ ತಾರಿಕ್ ರೆಹಮಾನ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು ಭಾರತ-ಬಾಂಗ್ಲಾದೇಶ ಸಂಬಂಧಗಳ ಕುರಿತ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರಿಸಿದರು. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧವನ್ನು ಹೇಗೆ ಮುಂದುವರಿಸಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ ನಮಗೆ, ಬಾಂಗ್ಲಾದೇಶ ಮತ್ತು ಜನರು ಮೊದಲು ಬರುತ್ತಾರೆ. ಆದ್ದರಿಂದ, ನಮ್ಮ ವಿದೇಶಾಂಗ ನೀತಿಯು ಬಾಂಗ್ಲಾದೇಶ ಮತ್ತು ಅದರ ಜನರಿಗೆ ಯಾವುದು ಉತ್ತಮ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ ಎಂದು ಹೇಳಿದರು.
ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ದೇಶವು ಒಗ್ಗಟ್ಟಿನಿಂದ ಇರಬೇಕು ಎಂದು ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಹೇಳಿದರು. ಮಾರ್ಗಗಳು ಮತ್ತು ಆಲೋಚನೆಗಳು ಭಿನ್ನವಾಗಿರಬಹುದು. ಆದರೆ ದೇಶದ ಹಿತಾಸಕ್ತಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಅವರು ಹೇಳಿದರು. ರಾಷ್ಟ್ರೀಯ ಏಕತೆ ಸಾಮೂಹಿಕ ಶಕ್ತಿಯಾಗಿದೆ. ಆದರೆ ವಿಭಜನೆ ದೌರ್ಬಲ್ಯವೆಂದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.
