Home Uncategorized ಅಕ್ರಮ ಮದ್ಯ ಮಾರಾಟ ಆರೋಪ; ಗಂಜಿಮಠ ಗ್ರಾ.ಪಂ. ಬಿಜೆಪಿ ಸದಸ್ಯನ ಬಂಧನ

ಅಕ್ರಮ ಮದ್ಯ ಮಾರಾಟ ಆರೋಪ; ಗಂಜಿಮಠ ಗ್ರಾ.ಪಂ. ಬಿಜೆಪಿ ಸದಸ್ಯನ ಬಂಧನ

49
0

ಗಂಜಿಮಠ: ಅಕ್ರಮವಾಗಿ ಮದ್ಯ ಮಾರಾಟ ಮಾಡಿದ್ದ ಆರೋಪದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ಜಯಾನಂದ ಕುಲಾಲ್ ಎಂದು ಗುರುತಿಸಲಾಗಿದ್ದು, ಇವರು ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರ ಆಪ್ತ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದು, ಶಾಸಕರೊಂದಿಗೆ ಇದ್ದ ಫೊಟೊವನ್ನು ಸಾಮಾಜಿಕ‌‌ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ.

ಆರೋಪಿ ಜಯಾನಂದ ಕುಲಾಲ್ ಅವರು ಡಿ.27ರಂದು ಮೊಗರು ಗ್ರಾಮದ ತೆಕ್ಕೆಮಾರ್ ಎಂಬಲ್ಲಿರುವ ತನ್ನ‌‌ ಗೂಡಂಗಡಿಯಲ್ಲಿ ಅಕ್ರಮವಾಗಿ‌ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು,  ಡಿ.27ರ ಸಂಜೆ 4.45ರ ಸುಮಾರಿಗೆ ಬಜ್ಪೆ ಪೊಲೀಸರು ರೌಂಡ್ಸ್ ನಲ್ಲಿದ್ದವೇಳೆ ಆರೋಪಿಯ ಅಂಗಡಿ‌ ಮುಂಭಾಗದಲ್ಲಿದ್ದ ಗ್ರಾಹಕರು ಪೊಲೀಸ್ ವಾಹನ ಕಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಇದನ್ನು ಕಂಡು ಅನುಮಾನಗೊಂಡ‌ ಪೊಲೀಸರು ಗೂಡಂಗಡಿಯನ್ನು ತಪಾಸಣೆಗೆ ಒಳಪಡಿಸಿದಾಗ ವಿವಿಧ ಬ್ರ್ಯಾಂಡ್ ಗಳ 90ಎಂಎಲ್ ನ ಒಟ್ಟು 18 ಟೆಟ್ರಾ ಪ್ಯಾಕ್ ಮದ್ಯ ದೊರಕಿದ್ದು, ಮದ್ಯ ಸಹಿತ ಆರೋಪಿ ಜಯಾನಂದ‌ ಕುಲಾಲ್ ನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಯು ಸಮೀಪ ಮದ್ಯ ಮಾರಾಟದ ಅಂಗಡಿಯಿಂದ ಮದ್ಯ ತಂದು ಅಕ್ರಮವಾಗಿ ತನ್ನ ಅಂಗಡಿಯಲ್ಲಿ ಶೇಖರಿಸಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಎಫ್ ಐ ಆರ್ ನಲ್ಲಿ ತಿಳಿಸಿದ್ದಾರೆ.

ಬಜ್ಪೆ ಪೊಲೀಸರಿಂದ ಜಾತಿ ಧರ್ಮದ ತಾರತಮ್ಯ?:

ಮದ್ಯ ಮಾರಾಟ ಹಾಗೂ ಆರೋಪಿಯ ಬಂಧನ ಡಿ.27ರಂದು‌ ನಡೆದಿದೆ. ಆದರೆ, ಈ ವರೆಗೂ ಬಜ್ಪೆ ಪೊಲೀಸರು ಮಾಧ್ಯಮಗಳಿಗೆ ಯಾವುದೇ ವರದಿ ನೀಡಿಲ್ಲ. ಯಾವುದೇ ಪ್ರಕರಣಗಳು ನಡೆದರೂ ಪೊಲೀಸ್ ಇಲಾಖೆಯ ಬ್ಲಾಗ್ ನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಬೇಕು‌. ಆದರೆ, ಘಟನೆ ನಡೆದು 24ಗಂಟೆ ಕಳೆದರೂ ಪೊಲೀಸ್ ಬ್ಲಾಗ್ ನಲ್ಲಿ ಮಾಹಿತಿ ಹಂಚಿ ಕೊಂಡಿಲ್ಲ. ಅಲ್ಲದೆ, ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ಕೇಳಿದರೆ, 10-15 ನಿಮಿಷ ಬಿಟ್ಟು ಮಾಡಿ, ಪ್ರಕರಣದ ಫೈಲ್ ಇಲ್ಲ, ಎಚ್ ಸಿ ಅವರಲ್ಲಿ ಕೇಳಬೇಕು ಎಂದೆಲ್ಲಾ ಪತ್ರಕರ್ತರನ್ನು ಸಾಗಹಾಕಲು ಯತ್ನಿಸಿದ್ದಾರೆ.

ಇನ್ನೂ ವಿಪರ್ಯಾಸ‌ವೆಂದರೆ, ಮದ್ಯ ಮಾರಾಟ ಪ್ರಕರಣ ದಾಖಲಾದ ಬಳಿಕ ದಾಖಲಾಗಿದ್ದ ದನ ದಾಗಾಟದ ಪ್ರಕರಣವನ್ನು ಅದೇ ದಿನ ಪೊಲೀಸ್ ಬ್ಲಾಗ್ ನಲ್ಲಿ ಪ್ರಕಟಿಸಿದ್ದ ಬಜ್ಪೆ ಪೊಲೀಸರು, ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ತಾರತಮ್ಯ ಎಸಗುತ್ತಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯಗಳಲ್ಲಿ ಕೇಳಿ ಬಂದಿವೆ.

ಪೊಲೀಸ್ ಠಾಣೆಯಲ್ಲಿ ಜಾತಿ, ಧರ್ಮದ ತಾರತಮ್ಯ ನಡೆಯುತ್ತಿಲ್ಲ. ಅಬಕಾರಿ ಇಲಾಖೆಗೆ ಸಂಬಂಧಿಸಿರುವ ಪ್ರಕರಣ‌ ಎಂದು ಮಾಹಿತಿ‌ ನೀಡಲು ನಿರಾಕರಿಸಿರಬಹುದು. ಮಾಹಿತಿಗಾಗಿ ಠಾಣೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಉತ್ತಮ.

ಸಂದೀಪ್, ಪೊಲೀಸ್‌ ನಿರೀಕ್ಷಕರು, ಬಜ್ಪೆ ಠಾಣೆ

LEAVE A REPLY

Please enter your comment!
Please enter your name here