ಹೊಸದಿಲ್ಲಿ: ಅಕ್ರಮ ಮರಳು ಗಣಿಗಾರಿಕೆ ಚಟುವಟಿಕೆಗಳ ಸಂಬಂಧ ರಾಷ್ಟ್ರೀಯ ಜನತಾ ದಳದ ಪ್ರಮುಖ ನಾಯಕ ಹಾಗೂ ಲಾಲೂ ಪ್ರಸಾದ್ ಯಾದವ್ರ ನಿಕಟವರ್ತಿ ಸುಭಾಷ್ ಯಾದವ್ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಆರ್ಜೆಡಿ ನಾಯಕ ಸುಭಾಷ್ ಯಾದವ್ ಅವರಿಗೆ ಸಂಬಂಧಿಸಿದ ಎಂಟು ಸ್ಥಳಗಳ ಮೇಲೆ 14 ಗಂಟೆಯ ದಾಳಿ ನಡೆಸಿದ ನಂತರ ಈ ಬಂಧನ ನಡೆದಿದೆ.
ಮೆಷರ್ಸ್ ಬ್ರಾಡ್ಸನ್ಸ್ ಕಮಾಡಿಟಿಟೀಸ್ ಪ್ರೈ. ಲಿ. ವಿರುದ್ಧ ಬಿಹಾರ ಪೊಲೀಸರು ದಾಖಲಿಸಿಕೊಂಡಿದ್ದ 20 ಎಫ್ ಐಆರ್ ಆಧರಿಸಿ, ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯವು ಈ ಕ್ರಮ ಜರುಗಿಸಿದೆ. ಸುಭಾಷ್ ಯಾದವ್ ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಬಿಹಾರ ಪೊಲೀಸರು ದಾಖಲಿಸಿಕೊಂಡಿರುವ ಎಫ್ ಐಆರ್ ಗಳಲ್ಲಿ ಬಿಸಿಪಿಎಲ್ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದೆ ಹಾಗೂ ಈ-ಚಲನ್ ಬಳಸದೆ ಮರಳಿನ ಮಾರಾಟ ಮಾಡುತ್ತಿದೆ. ಇದರಿಂದ ಪರಿಸರ ನಿಯಮಗಳ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ಆದಾಯ ನಷ್ಟವೂ ಆಗುತ್ತಿದೆ ಎಂದು ಆರೋಪಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಅಕ್ರಮ ಮರಳು ಮಾರಾಟದಿಂದ ರೂ. 161 ಕೋಟಿಯಷ್ಟು ಬೃಹತ್ ಮೊತ್ತವನ್ನು ಸಂಪಾದಿಸಿರುವುದು ಬೆಳಕಿಗೆ ಬಂದಿದೆ. ಅಕ್ರಮ ಮರಳು ವ್ಯಾಪಾರವನ್ನು ಗುಂಪೊಂದು ನಿಯಂತ್ರಿಸುತ್ತಿದೆ ಎಂದು ವರದಿಯಾಗಿದ್ದು, ಬಿಸಿಪಿಎಲ್ನಂಥ ಕಂಪನಿಗಳಲ್ಲಿ ಬಂಡವಾಳ ತೊಡಗಿಸುವ ಮೂಲಕ ಅನಧಿಕೃತ ಮರಳು ಮಾರಾಟದಿಂದ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ ಹಾಗೂ ಈ ಗುಂಪಿನಲ್ಲಿ ಸುಭಾಷ್ ಯಾದವ್ ಪ್ರಮುಖ ಪಾಲುದಾರ ಎಂದೂ ಹೇಳಲಾಗಿದೆ.