ಹೊಸದಿಲ್ಲಿ : ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ ರಹೀಮ್ ಸಿಂಗ್ ಗೆ ನ್ಯಾಯಾಲಯವು ಮತ್ತೆ ಪೆರೋಲ್ ಮಂಜೂರು ಮಾಡಿದೆ. ಈಗ 50 ದಿನಗಳ ಪೆರೋಲ್ ನಲ್ಲಿ ಸಿಂಗ್ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಇದು ಕಳೆದ 24 ತಿಂಗಳುಗಳಲ್ಲಿ ಸಿಂಗ್ ಗೆ ಲಭಿಸಿರುವ ಏಳನೇ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಒಂಭತ್ತನೇ ಪೆರೋಲ್ ಆಗಿದೆ.
ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನರಿಯಾ ಜೈಲಿನಲ್ಲಿ ಕಂಬಿಗಳ ಹಿಂದಿರುವ ಸಿಂಗ್ ಗೆ ಕಳೆದ ವರ್ಷವೊಂದರಲ್ಲೇ ಒಟ್ಟು 91 ದಿನಗಳ ಮೂರು ಪೆರೋಲ್ ಗಳನ್ನು ನೀಡಲಾಗಿತ್ತು. ಮಾಜಿ ದೇರಾ ಮುಖ್ಯಸ್ಥ ಶಾ ಸತ್ನಾಮ್ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ನವಂಬರ್ನಲ್ಲಿ 21 ದಿನ, ಜುಲೈನಲ್ಲಿ 30 ದಿನ ಮತ್ತು ಜನವರಿಯಲ್ಲಿ 40 ದಿನಗಳ ಪೆರೋಲ್ ನಲ್ಲಿ ಆತನನ್ನು ಬಿಡುಗಡೆಗೊಳಿಸಲಾಗಿತ್ತು.
ಆ ಸಂದರ್ಭದಲ್ಲಿ ಸಿಂಗ್ ಖಡ್ಗದಿಂದ ಜನ್ಮದಿನದ ಕೇಕ್ ಕತ್ತರಿಸುತ್ತಿದ್ದ ವೀಡಿಯೊ ಆನ್ಲೈನ್ನಲ್ಲಿ ವೈರಲ್ ಆಗಿತ್ತು. ‘ಐದು ವರ್ಷಗಳ ಬಳಿಕ ಹೀಗೆ ಜನ್ಮದಿನವನ್ನು ಆಚರಿಸುವ ಅವಕಾಶ ದೊರಕಿದೆ. ಹೀಗಾಗಿ ನಾನು ಐದು ಕೇಕ್ ಗಳನ್ನು ಕತ್ತರಿಸಬೇಕು. ಇದು ಮೊದಲನೆಯದು ’ಎಂದು ಆತ ಘೋಷಿಸಿದ್ದ.
ಶಸ್ತ್ರಾಸ್ತ್ರಗಳ ಬಹಿರಂಗ ಪ್ರದರ್ಶನವನ್ನು ಶಸ್ತ್ರಾಸ್ತ್ರಗಳ ಕಾಯ್ದೆಯಡಿ ನಿಷೇಧಿಸಲಾಗಿದೆ ಮತ್ತು ಖಡ್ಗದಿಂದ ಕೇಕ್ ಕತ್ತರಿಸುವುದು ಈ ವರ್ಗಕ್ಕೆ ಸೇರುತ್ತದೆ. ಆದರೆ ಸಿಂಗ್ ವಿರುದ್ಧ ಯಾವುದೇ ಕ್ರಮ ಜರುಗಿರಲಿಲ್ಲ.
ಸಿಂಗ್ಗೆ ಇತ್ತೀಚಿಗೆ ಲಭಿಸಿರುವ ಪೆರೋಲ್, ವಿಶೇಷವಾಗಿ ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅದನ್ನು ಸಮರ್ಥಿಸಿಕೊಂಡ ಬಳಿಕ ವಿವಾದವನ್ನು ಸೃಷ್ಟಿಸಿದೆ.
‘ರಾಮ ರಹೀಮ್ ಗೆ ಪೆರೋಲ್ ಸಿಕ್ಕಿರುವುದು ನನಗೆ ಗೊತ್ತಿಲ್ಲ. ಆದರೆ ಪೆರೋಲ್ ಸಿಕ್ಕಿದ್ದು ಹೌದಾದರೆ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕವೇ ಅದು ಮಂಜೂರಾಗಿರಬೇಕು ಮತ್ತು ಅದು ಆತನ ಹಕ್ಕು ಆಗಿದೆ. ಅದರಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ ’ ಎಂದು ಖಟ್ಟರ್ ಹೇಳಿದ್ದರು.
2022ರಲ್ಲಿಯೂ ಹರಿಯಾಣದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸಿಂಗ್ ಗೆ ಮೂರು ಸಲ ಪೆರೋಲ್ ನೀಡಿತ್ತು. ತನ್ನ ತಾಯಿಯನ್ನು ಭೇಟಿಯಾಗಲು 2021 ಮತ್ತು 2020ರಲ್ಲೂ ಆತನಿಗೆ ತಲಾ ಒಂದು ಬಾರಿ ಪೆರೋಲ್ ಲಭಿಸಿತ್ತು.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಹರ್ಯಾಣದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ ಸಿಂಗ್ ಗೆ ಪೆರೋಲ್ ಲಭಿಸಿದ್ದಾಗ ಆತ ನಡೆಸಿದ್ದ ‘ವರ್ಚುವಲ್ ಸತ್ಸಂಗ’ ದಲ್ಲಿ ಹಲವಾರು ಬಿಜೆಪಿ ನಾಯಕರು ಭಾಗವಹಿಸಿದ್ದರು ಮತ್ತು ಇದು ಪ್ರತಿಪಕ್ಷಗಳ ವಾಗ್ದಾಳಿಗಳಿಗೆ ಗುರಿಯಾಗಿತ್ತು.
ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಆಗಸ್ಟ್ 2017ರಲ್ಲಿ ಸಿಂಗ್ ನನ್ನು ಅಪರಾಧಿ ಎಂದು ಘೋಷಿಸಿತ್ತು.