Home Uncategorized ಅಥರ್ವ ಆಸ್ಪತ್ರೆಯಲ್ಲಿ ಬಾಲಕ ಮೃತ್ಯು ಪ್ರಕರಣ: ಶಸ್ತ್ರಚಿಕಿತ್ಸೆಯ ವೇಳೆ ನೀಡಿದ್ದ ಅರಿವಳಿಕೆಯಿಂದ ಸಾವು ಸಂಭವಿಸಿರುವ ಸಾಧ್ಯತೆ

ಅಥರ್ವ ಆಸ್ಪತ್ರೆಯಲ್ಲಿ ಬಾಲಕ ಮೃತ್ಯು ಪ್ರಕರಣ: ಶಸ್ತ್ರಚಿಕಿತ್ಸೆಯ ವೇಳೆ ನೀಡಿದ್ದ ಅರಿವಳಿಕೆಯಿಂದ ಸಾವು ಸಂಭವಿಸಿರುವ ಸಾಧ್ಯತೆ

19
0

ಸುರತ್ಕಲ್: ತನ್ನ ಕಾಲಿಗೆ ಆಗಿದ್ದ ಸಣ್ಣ ಗಾಯದ ಚಿಕಿತ್ಸೆಗಾಗಿ ಸುರತ್ಕಲ್ ಅಥರ್ವ ಆರ್ಥೋ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಕುಳಾಯಿ ನಿವಾಸಿ ಮೊಯ್ದಿನ್ ಫರ್ಹಾನ್ ಸಾವಿನ ಅಂತಿಮ ವರದಿ ‘ವಾರ್ತಾಭಾರತಿ’ಗೆ ಲಭ್ಯವಾಗಿದೆ. ಶಸ್ತ್ರಚಿಕಿತ್ಸೆಯ ವೇಳೆ ಬಾಲಕನಿಗೆ ನೀಡಿದ್ದ ಅರಿವಳಿಕೆ ಔಷಧಿಯಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಲಕನ ಸಾವಿನ ಬಳಿಕ ನಡೆಸಲಾಗಿದ್ದ ಪ್ರಾಥಮಿಕ ವರದಿಯಲ್ಲಿ ಶಸ್ತ್ರಚಿಕಿತ್ಸೆಗೆ ಮುನ್ನ ರೋಗಿಯ ಬೆನ್ನು ಹುರಿಗೆ (Spinal Anaesthsia) ಅನಸ್ತೇಶಿಯಾ ನೀಡಿದ ನಂತರ ಮೂರ್ಛೆರೋಗ ತರಹದ ಅಸಹಜ ಚಲನೆ ಕಾಣಿಸತೊ ಡಗಿತು. ಅದನ್ನು ನಿಯಂತ್ರಿಸಲು ಜನರಲ್ ಅನಸ್ತೇಶಿಯಾ ನೀಡಿ ಶಸ್ತ್ರಚಿಕಿತ್ಸೆ ನಿರ್ವಹಿಸಲಾಯಿತು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಒಪ್ಪಿಕೊಂಡಿರುವುದನ್ನೂ ಕೂಡ ವರದಿ ಉಲ್ಲೇಖಿಸಿದೆ.

ಆ ಹಿನ್ನೆಲೆಯಲ್ಲಿ ಸತತ ಮೂರು ತಿಂಗಳಿನಿಂದ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್. ಆರ್. ತಿಮ್ಮಯ್ಯರ ಅಧ್ಯಕ್ಷತೆಯಲ್ಲಿ ರಚಿಸಿದ್ದ ತನಿಖಾ ಸಮಿತಿಯು ಈ ಬಾಲಕನ ಮರಣಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲಾತಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ಮರಣೋತ್ತರ ಪರೀಕ್ಷೆಯ ಸಂದರ್ಭ ಗಮನಿಸಲಾದ ಅಂಶಗಳು ಮತ್ತು ಮೃತ ಬಾಲಕನ ಅಂಗಾಂಗಗಳ ಹಿಸ್ಟೋಪತಾಲಜಿ ವರದಿಗಳನ್ನು ಅಮೂಲಾಗ್ರವಾಗಿ ಅವಲೋಕಿಸಿ ಬಾಲಕನು ಅಪಸ್ಮಾರ (ಮೂರ್ಛೆರೋಗ)ದಿಂದ ಎದುರಾಗಿರುವ ಪ್ರತಿಕೂಲ ಪರಿಣಾಮಗಳಿಂದ ಮರಣ ಹೊಂದಿರಬಹುದು ಮತ್ತು ಅಪಸ್ಮಾರವು ಮೃತ ಬಾಲಕನಿಗೆ ಶಸ್ತ್ರಚಿಕಿತ್ಸೆ ವೇಳೆ ನೀಡಿರುವ ಅರಿವಳಿಕೆ ಔಷಧಿಯಿಂದ (Bupivacaine) ಸಂಭವಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅಂತಿಮ ವರದಿ ನೀಡಿದೆ.

ತನಿಖಾ ಸಮಿತಿಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೆಪಿಎಂಇ ನೋಡೆಲ್ ಅಧಿಕಾರಿ ಡಾ.ದೀಪಾ ಪ್ರಭು ಕೆ.ಪಿ., ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕೀಲು ತಜ್ಞ ಡಾ.ಸುಧಾಕರ ಡಿ., ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಕುಮಾರ್, ಮಂಗಳೂರು ಕೆಎಂಸಿ ಮೆಡಿಕಲ್ ಕಾಲೇಜಿನ ಅರಿವಳಿಕೆ ತಜ್ಞ ಡಾ. ರಂಜನ್ ರಾಮಕೃಷ್ಣ ಕೆ., ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಫಿಸಿಷಿಯನ್ ಡಾ. ವಿಜಯ ಕುಮಾರ್ ಎಂ., ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಕಾರ್ಡಿಯಾಲಜಿಸ್ಟ್ ಡಾ. ಪ್ರಭಾಕರ್ ಎಚ್., ಮಂಗಳೂರು ಯೆನೆಪೊಯ ಮೆಡಿಕಲ್ ಕಾಲೇಜಿನ ಶಸ್ತ್ರ ಚಿಕಿತ್ಸಕ ಡಾ. ಅನಂತ ಪ್ರಭು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

“ಅನಸ್ತೇಶಿಯಾದಿಂದ ಬಾಲಕನಿಗೆ ಮೂರ್ಛೆ ಬಂದಿದ್ದು, ಇದು ವೈದ್ಯರ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸಿದೆ. ಅಪಸ್ಮಾರ ಕಾಣಿಸಿಕೊಂಡು ಬಾಲಕ ಫರ್ಹಾನ್‌ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಸಂದರ್ಭ ಅಪಸ್ಮಾರಕ್ಕೆ ಚಿಕಿತ್ಸೆ ನೀಡುವ ಬದಲಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಇದರಲ್ಲೂ ವೈದ್ಯರ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಹಾಗಾಗಿ ದ.ಕ. ಜಿಲ್ಲಾಡಳಿತ ಮತ್ತು ಸರಕಾರ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಕುಟುಂಬದ ಜೊತೆ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ”.

-ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here