ಮಂಗಳೂರು, ಜ.13: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಪದಕ ಗೆದ್ದ ಮಾಸ್ಟರ್ಸ್ ಅಥ್ಲೀಟಿಕ್ಸ್ ಪಟುಗಳಿಗೆ ಈ ಹಿಂದೆ ಮಾಶಾಸನ ನೀಡುವ ಕ್ರಮವಿತ್ತು. ಬಳಿಕ ಅದನ್ನು ನಿಲ್ಲಿಸಲಾಗಿದೆ. ಈ ಮಾಸಾಶನವನ್ನು ಮತ್ತೆ ಆರಂಭಿಸಲು ಮುಖ್ಯಮಂತ್ರಿಯ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದರು.
ನಗರದ ಮಂಗಳಾ ಕ್ರೀಡಾಂಗಣದಲ್ಲಿ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ದ.ಕ. ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ನಗರದ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನದ 42ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರ ಕ್ರೀಡಾ ಇಲಾಖೆಯ ಮೂಲಕ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ರಾಜ್ಯದ ಕುಸ್ತಿ ಪಟುಗಳಿಗೆ ಮಾಶಾಸನ ನೀಡಲಾಗುತ್ತಿದೆ. ಇದರಂತೆಯೇ ಉಳಿದ ಕ್ರೀಡೆಗಳಲ್ಲಿ ಪದಕ ಗೆದ್ದವರಿಗೆ ಮಾಶಾಸನ ನೀಡಲು ಬಜೆಟ್ನಲ್ಲಿ ಸೂಕ್ತ ಮೊತ್ತ ಮೀಸಲಿಡಲಾಗುವುದು ಎಂದು ಸಚಿವ ನಾಗೇಂದ್ರ ಹೇಳಿದರು.
ದ.ಕ.ಜಿಲ್ಲೆಯು ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಮುಂಚೂಣಿಯಲ್ಲಿದೆ. ಜಿಲ್ಲೆಯ ಅನೇಕ ಕ್ರೀಡಾ ಸಾಧಕರು ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ನೂರಾರು ಯುವ ಕ್ರೀಡಾಪಟುಗಳನ್ನು ಕಂಡಿರುವ ನಾನು ಇಂದಿಲ್ಲಿ 30 ರಿಂದ 90 ವರ್ಷದವರೆಗಿನ ಕ್ರೀಡಾ ಸಾಧಕರನ್ನು ನೋಡಿದೆ. ಇದರಿಂದ ತುಂಬಾ ಸಂತೋಷವಾಗಿದೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದರು.
ಈ ಹಿಂದೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಉದ್ಯೋಗದಲ್ಲಿ ಒಲಿಂಪಿಕ್ ಮತ್ತು ಪ್ಯಾರಾ ಒಲಿಂಪಿಕ್ ಕ್ರೀಡೆಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಿಗೆ ಶೇ.2ಮೀಸಲಾತಿ ಕಲ್ಪಿಸಲಾಗಿತ್ತು, ಆದರೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕ್ರೀಡಾಪಟುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಲ್ಲಾ ಇಲಾಖೆಗಳಲ್ಲಿ ಶೇ.2 ಮೀಸಲಾತಿ ಕಲ್ಪಿಸಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿರುವ ಸ್ಥಳೀಯ ಕ್ರೀಡೆಗಳನ್ನು ಗೌರವಿಸಿ ‘ಒಂದು ಜಿಲ್ಲೆ -ಒಂದು ಕ್ರೀಡೆ’ ಎನ್ನುವ ಘೋಷವಾಕ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸ್ಥಳೀಯ ಕ್ರೀಡೆಗಳನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನ ನಡೆಸುತ್ತಿವೆ ಎಂದು ಸಚಿವ ನಾಗೇಂದ್ರ ತಿಳಿಸಿದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ ದ.ಕ.ಜಿಲ್ಲೆ ಶಿಕ್ಷಣಕಾಶಿ ಮಾತ್ರವಲ್ಲ ಕ್ರೀಡೆಯಲ್ಲೂ ಸಾಕಷ್ಟು ಗುರುತಿಸಿಕೊಂಡಿದೆ. ಇಲ್ಲಿನ ಸಾಕಷ್ಟು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಸರಕಾರದಿಂದ ನೆರವು ಸಿಕ್ಕಿದರೆ ಮತ್ತಷ್ಟು ಸಾಧನೆಯನ್ನು ಕ್ರೀಡಾಪಟುಗಳು ಮಾಡಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ವೇದವ್ಯಾಸ ಕಾಮತ್ ಈಗಾಗಲೇ ಅಂತಾರಾಷ್ಟ್ರೀಯ ಈಜುಕೊಳವನ್ನು ಸ್ಮಾರ್ಟ್ ಸಿಟಿಯ ಮೂಲಕ ಮಾಡಲಾಗಿದೆ. ಶೀಘ್ರ ಅಂತಾರಾಷ್ಟ್ರೀಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆಯಾಗಲಿದೆ. ಮಂಗಳಾ ಸ್ಟೇಡಿಯಂನಲ್ಲಿ ಜಿಮ್ನೇಶಿಯಂ ಕೂಡ ಮಾಡುವ ಯೋಜನೆ ಇದೆ. ರಾಜ್ಯ ಸರಕಾರ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ನೆರವಾಗಬೇಕು ಎಂದರು.
ದ.ಕ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಐವನ್ ಡಿಸೋಜ ಮಾತನಾಡಿ, ರಾಜ್ಯದ 31 ಜಿಲ್ಲೆಗಳಿಂದ 800 ಮಂದಿ ಕ್ರೀಡಾಟಪುಗಳು ಈ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ್ದಾರೆ. ಈ ಕ್ರೀಡಾಕೂಟದ ಮೂಲಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಪಟುಗಳಿಗೆ ಸರಕಾರ ಗುರುತಿಸುವ ಕೆಲಸ ಮಾಡಬೇಕು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ದ.ಕ.ಜಿಲ್ಲೆಯಿಂದ 60 ಮಂದಿ ಆಯ್ಕೆಯಾಗಿದ್ದರು. ಆದರೆ ಆರ್ಥಿಕ ಕೊರತೆಯಿಂದಾಗಿ 26 ಮಂದಿಗೆ ಮಾತ್ರ ಭಾಗವಹಿ ಸಲು ಸಾಧ್ಯವಾಗಿದೆ. ಇಂತಹ ಕ್ರೀಡಾಪಟುಗಳಿಗೆ ಆರ್ಥಿಕ ಶಕ್ತಿಯನ್ನು ತುಂಬಿಸುವ ಕೆಲಸ ಮುಂದಿನ ಬಜೆಟ್ನಲ್ಲಿ ಸರಕಾರ ಮಾಡಬೇಕು ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರವಿ ನಾಯಕ್, ಮುಡಾ ಮಾಜಿ ಅಧ್ಯಕ್ಷ ತೇಜೋಮಯ, ಮನಪಾ ವಿಪಕ್ಷ ನಾಯಕ ಪ್ರವೀಣ್ಚಂದ್ರ ಆಳ್ವ, ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎಚ್. ಜಯರಾಮಯ್ಯ, ಸಮಿತಿ ಸದಸ್ಯ ವೇಣು ಗೋಪಾಲ್, ದ.ಕ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಜಗದೀಶ್ ಶೆಟ್ಟಿ, ಕಾರ್ಯದರ್ಶಿ ಪ್ರಚಿತಾ ಕೆ, ಖಜಾಂಜಿ ನಂದಕುಮಾರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಇಫ್ತಿಕರ್ ಆಲಿ ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ರಾಜ್ಯದ 31 ಜಿಲ್ಲೆಗಳಿಂದ ಸಾವಿರಾರು ಕ್ರೀಡಾಪಟುಗಳು ಭಾಗವಹಿಸುವ ಈ ಕ್ರೀಡಾಕೂಟದಲ್ಲಿ 30 ರಿಂದ 90 ವರ್ಷದವರೆಗಿನ ನೂರಾರು ಮಹಿಳಾ ಮತ್ತು ಪುರುಷ ಅಥ್ಲೆಟ್ಗಳು ಪಾಲ್ಗೊಂಡಿದ್ದಾರೆ. ಮೊದಲ ದಿನದ ಕ್ರೀಡಾಕೂಟದಲ್ಲಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ 5,000 ಮೀಟರ್ ವಾಕ್, ಮಹಿಳೆಯರ 3,000 ಮೀಟರ್ ವಾಕ್, ಟ್ರಿಪಲ್ ಜಂಪ್, ಹೈ ಜಂಪ್, 1,500 ಮೀಟರ್ ಓಟ, ಡಿಸ್ಕಸ್ ಎಸೆತ, 100 ಮೀಟರ್, ಓಟ, ಜಾವೆಲಿನ್ ಎಸೆತ, 200 ಮೀಟರ್ ಓಟ, 5,000 ಮೀಟರ್ ಪುರುಷರ ಓಟ ಹಾಗೂ ಮಹಿಳೆಯರಿಗೆ 3,000 ಮೀಟರ್ ಓಟದ ಕ್ರೀಡಾಕೂಟ ನಡೆಯಿತು.
ರವಿವಾರ ಮಹಿಳೆಯರ ಮತ್ತು ಪುರುಷರ ಓಟ, ಹ್ಯಾಮರ್ ಎಸೆತ, ಲಾಂಗ್ಜಂಪ್, 800 ಮೀಟರ್ ಓಟ, ಶಾಟ್ಪುಟ್, ಹೈ ಜಂಪ್, 400 ಮೀಟರ್ ಓಟ, 100 ಮೀಟರ್ ಮತ್ತು 80 ಮೀಟರ್ ಹರ್ಡಲ್ಸ್ ರಿಲೇ ನಡೆಯಲಿದೆ.