Home Uncategorized ಆತ್ಮಹತ್ಯೆ ಮಾಡಿಕೊಂಡ ಸಾಕ್ಷಿ ಮೀಡಿಯಾ ವರದಿಗಾರ: ವೈಎಸ್‍ಆರ್‍ಸಿಪಿ ಶಾಸಕನ ಕಿರುಕುಳ ಕಾರಣ ಎಂದು ಆರೋಪಿಸಿದ ಕುಟುಂಬ

ಆತ್ಮಹತ್ಯೆ ಮಾಡಿಕೊಂಡ ಸಾಕ್ಷಿ ಮೀಡಿಯಾ ವರದಿಗಾರ: ವೈಎಸ್‍ಆರ್‍ಸಿಪಿ ಶಾಸಕನ ಕಿರುಕುಳ ಕಾರಣ ಎಂದು ಆರೋಪಿಸಿದ ಕುಟುಂಬ

23
0

ಅಮರಾವತಿ: ಸಾಕ್ಷಿ ಮೀಡಿಯಾ ಸುದ್ದಿ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ 45 ವರ್ಷ ವಯಸ್ಸಿನ ವರದಿಗಾರ ಗುರಿಜ ದಾಮೋದರ್ ರಾವ್, ಗುರುವಾರ ಶ್ರೀಕಾಕುಳಂನ ತಮ್ಮ ಗ್ರಾಮವಾದ ಲಾವೆಟಿಪಲೆಂನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ವರದಿಗಾರ ವಿಷ ಸೇವನೆ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಗಳು ಹೇಳುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹದ ಪಕ್ಕದಲ್ಲೇ ಮರಣ ಪತ್ರ ಕೂಡಾ ದೊರೆತಿದ್ದು, ಅದರಲ್ಲಿ ಎಚೆರ್ಲಾ ವಿಧಾನಸಭಾ ಕ್ಷೇತ್ರದ ಸ್ಥಳೀಯ ಶಾಸಕ ಗೊರ್ಲೆ ಕಿರಣ್ ಕುಮಾರ್ ತೀವ್ರ ಒತ್ತಡವನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.

ಪೊಲೀಸರ ಪ್ರಕಾರ, ದಾಮೋದರ್ ರಾವ್ ಡಿಸೆಂಬರ್ 26ರಿಂದ ಕಾಣೆಯಾಗಿದ್ದರು. ರಣಸ್ಥಳಂನ ಜೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಎರಡು ದಿನಗಳ ಬಳಿಕ, ದಾಮೋದರ್ ರಾವ್ ಅವರ ಮೃತ ದೇಹವು ಅವರ ನಿವಾಸದಿಂದ ಎರಡು ಕಿಮೀ ದೂರದಲ್ಲಿರುವ ಹೊಲದಲ್ಲಿ ಪತ್ತೆಯಾಗಿದೆ. ಅವರು ತನ್ನ ಸಾವಿಗೆ ವೈಎಸ್‍ಆರ್‍ಸಿಪಿ ಶಾಸಕ ಕಿರಣ್ ಕುಮಾರ್ ಹಾಗೂ ಲಂಕಪಲ್ಲೆ ಗೋಪಿ ಕಾರಣ ಎಂದು ಮರಣ ಪತ್ರದಲ್ಲಿ ದೂರಿದ್ದಾರೆ. “ಅವರು ನನಗೆ ಎಲ್ಲ ರೀತಿಯಲ್ಲೂ ತೊಂದರೆ ನೀಡಿದರು. ಅವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ” ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮರಣ ಪತ್ರ ದೊರೆತ ಹೊರತಾಗಿಯೂ ಶಾಸಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವುದರಿಂದ ಪೊಲೀಸರು ದೂರ ಉಳಿದಿದ್ದಾರೆ. ಈ ಕುರಿತು TNM ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಜೆ.ಆರ್.ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಿ.ರಾಜೇಶ್, “ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 174ರ ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಪತ್ರದಲ್ಲಿರುವ ಕೈಬರಹ ಮೃತ ವ್ಯಕ್ತಿಯದ್ದೋ ಅಲ್ಲವೊ ಎಂದು ದೃಢಪಡಿಸಿಕೊಳ್ಳಲು ನಾವು ಆ ಪತ್ರವನ್ನು ವಿಧಿ ವಿಜ್ಞಾನ ತಜ್ಞರಿಗೆ ಹಸ್ತಾಂತರಿಸಿದ್ದೇವೆ. ಆ ಕುರಿತು ವರದಿ ಬಂದ ನಂತರ ಯಾವ ಸೂಕ್ತ ಸೆಕ್ಷನ್ ಗಳು ಅನ್ವಯವಾಗುತ್ತವೆ ಎಂಬ ಕುರಿತು ಮಾಹಿತಿ ನೀಡುತ್ತೇವೆ” ಎಂದು ಹೇಳಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮಾಲಕತ್ವದ ಸಾಕ್ಷಿ ಮೀಡಿಯಾ ಸುದ್ದಿ ಸಂಸ್ಥೆಯಲ್ಲಿ ದಾಮೋದರ್ ರಾವ್ ಕೆಲಸ ಮಾಡುತ್ತಿದ್ದರು ಎಂದು ಅವರ ಸಹೋದರ ಶ್ರೀನಿವಾಸ ರಾವ್ ತಿಳಿಸಿದ್ದಾರೆ. 2019ರ ಚುನಾವಣೆಯಲ್ಲಿ ದಾಮೋದರ್ ರಾವ್ ಗೊರ್ಲೆ ಕಿರಣ್ ಕುಮಾರ್ ಪರವಾಗಿ ಸಕ್ರಿಯ ಪ್ರಚಾರ ಕೈಗೊಂಡಿದ್ದರು. “ನನ್ನ ಸಹೋದರ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಹಾಗೂ ಆತ ಪ್ರಬಲವಾಗಿ ವೈಎಸ್‍ಆರ್‍ಸಿಪಿಯನ್ನು ಬೆಂಬಲಿಸುತ್ತಿದ್ದ. ಈ ದಾರಿಯಲ್ಲಿ ಆತ ನಾಯಕತ್ವದ ಕೌಶಲವನ್ನು ಬೆಳೆಸಿಕೊಂಡಿದ್ದ. ಆದರೆ, ಕಿರಣ್ ಕುಮಾರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನನ್ನ ಸಹೋದರನಿಗೆ ಶಾಸಕರ ಸಹಚರ ಲಂಕೆಲ್ಲ ಗೋಪಿ ಕಿರುಕುಳ ನೀಡತೊಡಗಿದರು. ಶಾಸಕರ ತಪ್ಪುಗಳನ್ನು ಮಾಧ್ಯಮ ಮಂದಿ ಎದುರು ದಾಮೋದರ್ ಬಹಿರಂಗಗೊಳಿಸುತ್ತಿದ್ದುದರಿಂದ ಅವರಿಬ್ಬರ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆತನಿಗೆ ಕಳೆದ ಆರು ತಿಂಗಳಿನಿಂದ ಮಾನಸಿಕ ಕಿರುಕುಳ ನೀಡಲಾಗಿತ್ತು” ಎಂದು ಅವರು ಆರೋಪಿಸಿದ್ದಾರೆ.

ದಾಮೋದರ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕಿರಣ್ ಕುಮಾರ್, ನಾನು ಪೊಲೀಸರ ತನಿಖೆಯೊಂದಿಗೆ ಸಹಕರಿಸುತ್ತೇನೆ. “ಮೃತ ವ್ಯಕ್ತಿಯು ವೈಎಸ್‍ಆರ್‍ಸಿಪಿಯ ಕಾರ್ಯಕರ್ತನಾಗಿದ್ದರು. ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಯಬೇಕಿದೆ ಹಾಗೂ ಅವರ ಪತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ” ಎಂದು ಡಿಸೆಂಬರ್ 28ರಂದು ಎಚೆರ್ಲಾದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here