ಮಂಗಳೂರು, ಜ.24: ಆರ್. ಎಫ್. ಸಿ. ಮಸ್ಕರೇನ್ಹಸ್ ಅವರ 150ನೇ ಜನ್ಮ ದಿನಾಚರಣೆ ಮತ್ತು ಗುರುದೀಕ್ಷೆಯ ಶತಮಾನೋತ್ತರ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಬೆಂದೂರಿನ ಸೈoಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಸಂಭ್ರಮದ ಪವಿತ್ರ ಬಲಿಪೂಜೆ ನಡೆಯಿತು.
ಅತಿ ವಂ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಪಾಟ್ನಾದ ನಿವೃತ್ತ ಆರ್ಚ್ ಬಿಷಪ್ ವಂ.ವಿಲಿಯಂ ಡಿಸೋಜ, ಬೆಂದೂರಿನ ಸೈoಟ್ ಸೆಬಾಸ್ಟಿಯನ್ ಚರ್ಚ ಧರ್ಮಗುರು ವಂ.ಫಾ.ವಿನ್ಸೆಂಟ್ ಮೊಂತೇರೋ ಹಾಗೂ ಮಂಗಳೂರು ಧರ್ಮಪ್ರಾಂತದ ಅನೇಕ ಧರ್ಮಗುರುಗಳೊಂದಿಗೆ ಬಲಿಪೂಜೆ ನೆರವೇರಿಸಿದರು.
ಬಿಜೈ ಚರ್ಚ್ ನ ಧರ್ಮಗುರು ವಂ. ಜೆ. ಬಿ. ಸಲ್ದಾನ ಮಾತನಾಡಿ, ಆರ್. ಎಫ್. ಸಿ. ಮಸ್ಕರೇನ್ಹಸ್ ರವರು ಬೆಥನಿ ಕನ್ಯಾ ಮಠ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ ಮತ್ತು ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದವರು. ಅವರ ತತ್ವ, ಆದರ್ಶಗಳು ನಮಗೆಲ್ಲರಿಗೂ ಆದರ್ಶ ಮತ್ತು ಅನುಕರಣೀಯ ಎಂದರು.
ಇದೇವೇಳೆ ಫಾ.ಆರ್.ಎಫ್. ಸಿ. ಮಸ್ಕರೇನ್ಹಸ್ ಅವರ ಜೀವನ, ತತ್ವ ಮತ್ತು ಆದರ್ಶಗಳನ್ನು ಒಳಗೊಂಡ ಸಾಕ್ಷ್ಯಚಿತ್ರವೊಂದನ್ನು ಪ್ರದರ್ಶಿಸಲಾಯಿತು.
ಬೆಥನಿ ಸಂಸ್ಥೆಯ ಮಹಾಮಾತೆ ಭಗಿನಿ ರೋಸ್ ಸೆಲಿನ್, ಇತರ ಭಗಿನಿಯರು, ಅನೇಕ ಧರ್ಮಗುರುಗಳು ಉಪಸ್ಥಿತರಿದ್ದರು.