ಮಂಗಳೂರು: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಕೋಲಾರ ಮೂಲದ ಸಂಜಯ್ ಭುವನ್ ಎಂಬಾತ ಮಾ.12ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಲೇಜಿನಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಎನ್.ಎಸ್.ಯು.ಐ ಒತ್ತಾಯಿಸಿದೆ.
ಈ ಬಗ್ಗೆ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರ ನೇತೃತ್ವದ ತಂಡವು ಮೂಡುಬಿದಿರೆ ಇನ್ಸ್ಪೆಕ್ಟರ್ ನಿತ್ಯಾನಂದ ಪಂಡಿತ್ ಅವರನ್ನು ಭೇಟಿಯಾಗಿ ಮನವಿ ನೀಡಿದೆ.
ಸಂಜಯ್ ಭುವನ್ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದು, ಆತ ಹಾಸ್ಟೆಲ್ ನಲ್ಲಿ ಯಾರದೋ ಸಣ್ಣ ದುಡ್ಡು ತೆಗೆದಿದ್ದನೆಂದೂ, ಇದು ಆಡಳಿತ ಮಂಡಳಿಯವರಿಗೆ ಗೊತ್ತಾಗಿ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದೂ ಹೇಳಲಾಗುತ್ತಿದೆ.
ಹಣ ತೆಗೆದ ಆರೋಪದಲ್ಲಿ ಆಡಳಿತ ವರ್ಗದ ಯಾರಾದರೂ ಆತನಿಗೆ ಹಲ್ಲೆ ಮಾಡಿದ್ದರೋ, ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡನೋ ಗೊತ್ತಿಲ್ಲ, ಆದರೆ ಒಂದು ವೇಳೆ ಹಲ್ಲೆ ನಡೆಸಿದ್ದು ಹೌದಾದರೆ ಆ ಸಿಬ್ಬಂದಿಯನ್ನು ತಕ್ಷಣ ಸಸ್ಪೆಂಡ್ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಶಿಕ್ಷಣ ಕಾಶಿ ಎಂದೆನಿಸಿಕೊಂಡಿರುವ ಮೂಡುಬಿದಿರೆಯ ಆಳ್ವಾಸ್ ನಲ್ಲಿ ಪದೇ ಪದೇ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು, ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸ ಬಾರದು, ಸೂಸೈಡ್ ಮಾಡಿಕೊಂಡ ವಿದ್ಯಾರ್ಥಿ ಮನೆಯವರಿಗೆ ನ್ಯಾಯ ಸಿಗಬೇಕೆಂದು ಎನ್.ಎಸ್.ಯು.ಐ ಆಗ್ರಹಿಸಿದೆ.
ಎನ್.ಎಸ್.ಯು.ಐ.ನ ವಿವಿಧ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.