ಚಿಕ್ಕಮಗಳೂರು: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಕುಟುಂಬಗಳಿಗೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಲಾಗಿದೆ.
ಸಹಾಯವಾಣಿಯ ಸಂಚಾಲಕ ಹಿದಾಯತ್ ಅಡ್ಡೂರ್ ಅವರು ಮಾತನಾಡಿ, ತಂಡವು ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿದೆ. ಅಗತ್ಯವಿದ್ದರೆ ವೈದ್ಯಕೀಯ ನೆರವು ಒದಗಿಸುವ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಅವರು ದುಬೈ, ಶಾರ್ಜಾಹ್, ಅಬುಧಾಬಿ ಹಾಗೂ ಅಜ್ಮಾನ್ನಲ್ಲಿ ಸಿಲುಕಿರುವ ಕನ್ನಡಿಗರು ಯಾವುದೇ ನೆರವು ಅಗತ್ಯವಿದ್ದರೆ ಸಂಘದ ಸದಸ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಎನ್ಆರ್ಐ ಫೋರಂ (ಕೆಎನ್ಆರ್ಐಎಫ್) ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಮಾತನಾಡಿ, ಯುಎಇಯಲ್ಲಿರುವ ಕನ್ನಡಿಗರು ಶಾಂತಚಿತ್ತದಿಂದಿರಬೇಕು. ವಾಟ್ಸಾಪ್ ಗುಂಪುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ, ತಪ್ಪು ಮಾಹಿತಿಯನ್ನು ಹಂಚಬಾರದು ಎಂದು ಸೂಚಿಸಿದ್ದಾರೆ.
ಯುಎಇ ಸರ್ಕಾರ ದೇಶದಲ್ಲಿರುವ ಎಲ್ಲಾ ಎನ್ಆರ್ಐಗಳ ಸುರಕ್ಷತೆ ಬಗ್ಗೆ ಭರವಸೆ ನೀಡಿದ್ದು, ಅಲ್ಲಿರುವ ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ದುಬೈನಲ್ಲಿ ನೆಲೆಸಿರುವ ಕನ್ನಡಿಗ ಕೈಗಾರಿಕೋದ್ಯಮಿ ರೊನಾಲ್ಡ್ ಕೊಲಾಸೊ ಅವರು ಮಾತನಾಡಿ, ಆತಂಕಪಡಬಾರದು ಎಂದು ಕರೆ ನೀಡಿದ್ದಾರೆ.
ಪರಿಸ್ಥಿತಿ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದ್ದು, ವಿಮಾನ ಸೇವೆಗಳು ಪುನರಾರಂಭವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುಎಇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅತ್ಯವಶ್ಯಕ ಎಂದು ಅವರು ಒತ್ತಿಹೇಳಿದ್ದು, ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರ ತುರ್ತು ಪರಿಹಾರ ನಿಧಿ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.
