ಹೊಸದಿಲ್ಲಿ: ಪ್ರತಿಪಕ್ಷ ನಾಯಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ಕಣ್ಗಾವಲು ತೀವ್ರಗೊಂಡಿರುವ ನಡುವೆಯೇ ಕೇಂದ್ರ ಸರಕಾರವು ಪ್ರತಿಬಂಧಕ ಆದೇಶಗಳನ್ನು ನೀಡಿರುವ ದಾಖಲೆಗಳನ್ನು ನಾಶಗೊಳಿಸುವ ಅಧಿಕಾರವನ್ನು ಗೃಹ ಕಾರ್ಯದರ್ಶಿಗೆ ನೀಡಿದೆ. ಕರೆಗಳ ಮೇಲೆ ಕಣ್ಗಾವಲನ್ನು ನಿಯಂತ್ರಿಸಲು ರೂಪಿಸಲಾಗಿದ್ದ 2009ರ ನಿಯಮಗಳಡಿ ಈವರೆಗೆ ಈ ಅಧಿಕಾರವನ್ನು ಭದ್ರತಾ ಏಜೆನ್ಸಿಗಳು ಮಾತ್ರ ಹೊಂದಿದ್ದವು. 2018ರಲ್ಲಿ ಗೃಹ ಸಚಿವಾಲಯವು ಶಾಸನಬದ್ಧ ಆದೇಶವೊಂದರಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಮತ್ತು ಗುಪ್ತಚರ ಸಂಸ್ಥೆ (ಐಬಿ) ಸೇರಿದಂತೆ 10 ಸಂಸ್ಥೆಗಳಿಗೆ ದೂರವಾಣಿ ಸಂವಹನಗಳನ್ನು ಕದ್ದಾಲಿಸಲು ಅಧಿಕಾರವನ್ನು ನೀಡಿತ್ತು ಎಂದು thehindu.com ವರದಿ ಮಾಡಿದೆ.
ಈ ಏಜೆನ್ಸಿಗಳು ಆರು ತಿಂಗಳುಗಳ ಒಳಗೆ ಪ್ರತಿಬಂಧಕ ಆದೇಶಗಳನ್ನು ನಾಶಗೊಳಿಸುವುದು ಅಗತ್ಯವಾಗಿತ್ತು. ಫೆ.26ರಂದು ಹೊರಡಿಸಲಾಗಿರುವ ಆದೇಶವು ನಾಶಗೊಳಿಸುವ ಅಧಿಕಾರವನ್ನು ಗೃಹ ಕಾರ್ಯದರ್ಶಿಗೆ ವಿಸ್ತರಿಸಿದೆ. ಗೃಹ ಕಾರ್ಯದರ್ಶಿಗೆ ಈ ಅಧಿಕಾರವನ್ನು ನೀಡುವ ತಿದ್ದುಪಡಿಯನ್ನು ಹೊರಡಿಸಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕಣ್ಗಾವಲು ದಾಖಲೆಗಳನ್ನು ನಾಶಗೊಳಿಸುವ ಅಧಿಕಾರಗಳನ್ನು ಕೇಂದ್ರೀಕರಿಸಲು ಕ್ರಮವನ್ನು ತೆಗೆದುಕೊಂಡಿದ್ದು ಏಕೆ ಎನ್ನುವುದು ಸ್ಪಷ್ಟವಾಗಿಲ್ಲ.
‘ಸಚಿವಾಲಯವು ರಹಸ್ಯ ಆದೇಶಗಳನ್ನು ಹೊರಡಿಸುತ್ತದೆ, ಕಂಪನಿಗಳಿಗೆ ಕಂಟೆಂಟ್ಗಳನ್ನು ತೆಗೆದುಹಾಕುವ ಮತ್ತು ನಿರ್ಬಂಧಿಸುವ ಮತ್ತು ವ್ಯವಹಾರ ನಷ್ಟದ ಬೆದರಿಕೆಗಳನ್ನು ಒಡ್ಡುತ್ತದೆ ಎನ್ನುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ಇಂತಹ ಆದೇಶಗಳ ಯಾವುದೇ ಕುರುಹು ಇರುವುದಿಲ್ಲ ಎನ್ನುವುದನ್ನು ಅದು ಖಚಿತಪಡಿಸಿಕೊಳ್ಳುತ್ತಿದೆ’ ಎಂದು ನ್ಯಾಯವಾದಿ ಹಾಗೂ ಡಿಜಿಟಲ್ ಹಕ್ಕುಗಳ ಕಾರ್ಯಕರ್ತೆ ಮಿಶಿ ಚೌಧರಿ ಹೇಳಿದ್ದಾರೆ.
ರಾಜಕೀಯ ಉದ್ದೇಶಗಳಿಗಾಗಿ ಸರಕಾರದಿಂದ ಕಣ್ಗಾವಲಿನ ಆರೋಪಗಳು ಭಾರತದಲ್ಲಿ ಹೊಸದೇನಲ್ಲ. ಆದರೆ ಎನ್ಡಿಎ ಸರಕಾರವು ಅಧಿಕಾರಕ್ಕೆ ಬಂದ ನಂತರ ಕಣ್ಗಾವಲು ಪ್ರಮಾಣವು ನಾಟಕೀಯವಾಗಿ ಏರಿಕೆಯಾಗಿದೆ. ಕನಿಷ್ಠ 2015ರಿಂದ ಕರೆಗಳ ಕದ್ದಾಲಿಕೆಗೆ ಮನವಿಗಳ ದತ್ತಾಂಶಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಭಾರತೀಯ ದೂರಸಂಪರ್ಕ ಕಂಪನಿಗಳನ್ನು ಪ್ರತಿನಿಧಿಸುವ ಸೆಲ್ಯುಲರ್ ಆಪರೇಟರ್ಸ್ ಅಸೋಷಿಯೇಷನ್ ಆಫ್ ಇಂಡಿಯಾ ಟ್ರಾಯ್ಗೆ ಸಲ್ಲಿಸಿರುವ ಫೈಲಿಂಗ್ನಲ್ಲಿ 2021ರಿಂದ ಇಂತಹ ಮನವಿಗಳು ತೀವ್ರವಾಗಿ ಹೆಚ್ಚುತ್ತಿವೆ ಎಂದು ಹೇಳಿದೆ. ಭಾರ್ತಿ ಏರ್ಟೆಲ್ ಇಂತಹ ಮನವಿಗಳನ್ನು ಕಾರ್ಯಗತಗೊಳಿಸಲು ಭಾಗಶಃ ವೆಚ್ಚವನ್ನೂ ಕೇಂದ್ರ ಸರಕಾರವು ಪಾವತಿಸುತ್ತಿದೆ ಎಂದು ಹೇಳಿದೆ.