ಬೆಂಗಳೂರು: ಈಜಿಪುರ ಫ್ಲೈಓವರ್ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ತೀವ್ರವಾಗಿ ಕಿಡಿಕಾರಿದ್ದು, ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ವೇಳೆ ಈಜಿಪುರ ಫ್ಲೈಓವರ್ ಪ್ರಗತಿಯನ್ನೂ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಯ ನಿಧಾನಗತಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಮಯಕ್ಕೆ ಕಾಮಗಾರಿ ಮುಗಿಸಲು ಹೆಚ್ಚುವರಿ ಯಂತ್ರೋಪಕರಣ ಹಾಗೂ ಮಾನವ ಬಲ ನಿಯೋಜಿಸಿ ಎಲ್ಲಾ ಘಟಕಗಳನ್ನು ಸಮಾಂತರವಾಗಿ ಕಾರ್ಯಗತಗೊಳಿಸುವಂತೆ ಸೂಚಿಸಿದರು.
ಇದೇ ವೇಳೆ ಸೇಂಟ್ ಜಾನ್ಸ್ ಆಸ್ಪತ್ರೆ ಸಮೀಪದ ಪಿಲ್ಲರ್ ಸ್ಥಾಪನೆಗೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಿದ್ದು, ಮೂರು ವಾರ ಕಳೆದರೂ ಪೈಲಿಂಗ್ ಕೆಲಸ ವಿಳಂಬವಾಗಿರುವುದಕ್ಕೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಪೈಲಿಂಗ್ ಕಾಮಗಾರಿಯನ್ನು 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಹಾಗೂ ಪೈಲ್ ಕ್ಯಾಪ್, ಪಿಲ್ಲರ್ ನಿರ್ಮಾಣ ಮತ್ತು ಸೂಪರ್ಸ್ಟ್ರಕ್ಚರ್ ಸೆಗ್ಮೆಂಟ್ ಕಾಸ್ಟಿಂಗ್ ಕಾರ್ಯಗಳನ್ನು ಸಮಾಂತರವಾಗಿ ನಡೆಸುವಂತೆ ಆದೇಶಿಸಿದರು.
ಮಳೆನೀರು ಪೈಪ್ಲೈನ್ ಕಾಮಗಾರಿಗೆ ರಸ್ತೆ ಒಂದು ಬದಿಯಲ್ಲಿ ವಾಹನ ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸ್ ಅನುಮತಿ ಪಡೆಯುವಂತೆ ಸೂಚಿಸಿದ ಅವರು, ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರೀಯ ಸದನ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಗೆ ಸೇರಿದ ಭೂಮಿ ವಶಪಡಿಸಿಕೊಳ್ಳಲು ಹಾಗೂ ಈಜಿಪುರ ಸಿಗ್ನಲ್ ಸಮೀಪ ರ್ಯಾಂಪ್ ಕಾಮಗಾರಿಯನ್ನು ತ್ವರಿತಗೊಳಿಸಲು ನಿರ್ದೇಶನ ಸೂಚನೆ ನೀಡಿದರು.
