ನವದೆಹಲಿ: ರಾಜಕೀಯದಲ್ಲಿ ‘ಫ್ರೀಬೀಸ್’ ಸಂಸ್ಕೃತಿ ಹೆಚ್ಚುತ್ತಿರುವುದನ್ನು ಖಂಡಿಸಿದ ಸುಪ್ರೀಂ ಕೋರ್ಟ್, ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ಇಂತಹ ನೀತಿಗಳನ್ನು ಪುನರ್ವಿಮರ್ಶಿಸುವ ಸಮಯ ಬಂದಿದೆ ಎಂದು ಗುರುವಾರ ಹೇಳಿದೆ.
ಗ್ರಾಹಕರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರಿಗೂ ಉಚಿತ ವಿದ್ಯುತ್ ಒದಗಿಸಲು ಮುಂದಾಗಿರುವ ತಮಿಳುನಾಡು ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ನ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಪೀಠ, ರಾಜ್ಯಗಳು ಬಡವರನ್ನು ಬೆಂಬಲಿಸುವುದು ಅರ್ಥವಾಗುವಂತಹದ್ದು. ಆದರೆ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಹೇಳಿದೆ.
“ದೇಶದ ಹೆಚ್ಚಿನ ರಾಜ್ಯಗಳು ಆದಾಯ ಕೊರತೆಯನ್ನು ಎದುರಿಸುತ್ತಿದೆ. ಆದರೂ ಅವು ಅಭಿವೃದ್ಧಿಗೆ ಬದಲಾಗಿ ಉಚಿತ ಕೊಡುಗೆಗಳನ್ನು ನೀಡುತ್ತಿವೆ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರನ್ನೊಳಗೊಂಡ ಪೀಠ ಹೇಳಿದೆ.
ಈ ರೀತಿಯ ದೊಡ್ಡ ದೊಡ್ಡ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ರಾಜ್ಯ ಸರ್ಕಾರಗಳು ಎಲ್ಲರಿಗೂ ಉಚಿತ ಆಹಾರ, ಸೈಕಲ್ಗಳು, ವಿದ್ಯುತ್ ನೀಡುವ ಬದಲು ಉದ್ಯೋಗ ಒದಗಿಸುವ ಮಾರ್ಗಗಳನ್ನು ಹುಡುಕಬೇಕು ಎಂದು ಪೀಠ ಸಲಹೆ ನೀಡಿದೆ.
ಆದಾಗ್ಯೂ, ಉಚಿತ ವಿದ್ಯುತ್ ಒದಗಿಸಲು ಪ್ರಸ್ತಾಪಿಸಿರುವ ಡಿಎಂಕೆ ಸರ್ಕಾರದ ನೇತೃತ್ವದ ವಿದ್ಯುತ್ ವಿತರಣಾ ಸಂಸ್ಥೆಯ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ತಮಿಳುನಾಡು ವಿದ್ಯುತ್ ಸಂಸ್ಥೆಯು 2024 ರ ವಿದ್ಯುತ್ ತಿದ್ದುಪಡಿ ನಿಯಮವನ್ನು ಪ್ರಶ್ನಿಸಿದೆ.
“ಭಾರತದಲ್ಲಿ ನಾವು ಯಾವ ರೀತಿಯ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ? ವಿದ್ಯುತ್ ಶುಲ್ಕವನ್ನು ಪಾವತಿಸಲು ಅಸಮರ್ಥರಾಗಿರುವವರಿಗೆ ಕಲ್ಯಾಣ ಕ್ರಮದ ಭಾಗವಾಗಿ ನೀವು ವಿದ್ಯುತ್ ಒದಗಿಸಲು ಬಯಸುತ್ತೀರಿ ಎಂಬುದು ಅರ್ಥವಾಗುವಂತಹದ್ದೆ” ಎಂದು ಪೀಠ ಹೇಳಿದೆ.
“ರಾಜ್ಯಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು. ನೀವು ಬೆಳಗ್ಗೆಯಿಂದ ಸಂಜೆಯವರೆಗೆ ಉಚಿತ ಆಹಾರ, ಉಚಿತ ಸೈಕಲ್, ನಂತರ ಉಚಿತ ವಿದ್ಯುತ್ ನೀಡಲು ಪ್ರಾರಂಭಿಸಿದರೆ ಯಾರು ಕೆಲಸ ಮಾಡುತ್ತಾರೆ ಮತ್ತು ಜನರಲ್ಲಿ ಕೆಲಸ ಮಾಡುವ ಮನೋಭಾವ ಕಡಿಮೆಯಾಗುತ್ತದೆ” ಎಂದು ಸಿಜೆಐ ಹೇಳಿದರು.
