ಉಡುಪಿ : ಕ್ರೈಸ್ತರಿಗೆ ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ)ವನ್ನು ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಿದರು.
ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಬೆಳಗ್ಗಿನಿಂದಲೇ ಪ್ರಾರ್ಥನೆ, ಧ್ಯಾನ ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಕ್ರೈಸ್ತರು ಬೆಳಗ್ಗಿನಿಂದಲೇ ಉಪವಾಸವನ್ನು ಕೈಗೊಂಡು ದಿನವಿಡೀ ಯೇಸು ಸ್ವಾಮಿಯನ್ನು ಶಿಲುಬೆಗೇರಿಸುವ ಘಟನಾವಳಿ ಗಳನ್ನು ಮೆಲುಕು ಹಾಕುವ ಮೂಲಕ ಕಳೆದರು.
ಉಡುಪಿ ಧರ್ಮಪ್ರಾಂತದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಧರ್ಮಾಧ್ಯಕ್ಷರಾದ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಶುಭ ಶುಕ್ರವಾರದ ಪ್ರಾರ್ಥನಾ ವಿಧಿ ನೆರವೇರಿಸಿದರು. ಈ ಸಂಧರ್ಭ ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಚರ್ಚಿನ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ. ಜೋಯ್ ಅಂದ್ರಾದೆ, ಪಿಲಾರ್ ಸಭೆಯ ವಂ.ನಿತೇಶ್ ಡಿಸೋಜಾ, ನಿವೃತ್ತ ಧರ್ಮಗುರುಗಳಾದ ವಂ.ಲೊರೆನ್ಸ್ ರೊಡ್ರಿಗಸ್, ವಂ.ಲೊರೆನ್ಸ್ ಮಾರ್ಟಿಸ್ ಉಪಸ್ಥಿತರಿದ್ದರು.
ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಗುಡ್ ಫ್ರೈಡೆ ಸಂದೇಶದಲ್ಲಿ ಪವಿತ್ರ ಶುಕ್ರವಾರದಂದು ಯೇಸು ಸ್ವಾಮಿ ಲೋಕದ ಪಾಪದ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದರು. ಕ್ರಿಸ್ತ ಯೇಸು ಯಾವ ಪಾಪ ವನ್ನೂ ಮಾಡಲಿಲ್ಲ, ಅವರನ್ನು ಅವಮಾನ ಪಡಿಸಿದರೂ ಅವರು ಪ್ರತಿಭಟಿಸಲಿಲ್ಲ, ಯಾತನೆಯನ್ನು ಅನುಭವಿಸು ತ್ತಿರುವಾ ಗಲೂ ಯಾರಿಗೂ ಬೆದರಿಕೆ ಹಾಕಲಿಲ್ಲ, ಪ್ರತಿಯಾಗಿ ಸತ್ಯ ಸ್ವರೂಪಿ ಹಾಗೂ ನ್ಯಾಯಪತಿಯಾದ ದೇವರಿಗೆ ತಮ್ಮನ್ನೇ ಸಮ ರ್ಪಿಸಿಕೊಂಡರು. ನಾವು ಪಾಪದ ಪಾಲಿಗೆ ಸಾಯಬೇಕು, ಸತ್ಯಕ್ಕಾಗಿ ಜೀವಿಸಬೇಕೆಂದು ಕ್ರಿಸ್ತ ಯೇಸು ತಮ್ಮ ದೇಹದಲ್ಲಿ ನಮ್ಮ ಪಾಪಗಳನ್ನು ಹೊತ್ತು ಕೊಂಡರು. ಹೊತ್ತು ಶಿಲುಬೆಯ ಮರವನ್ನೇರಿದರು ಎಂದರು.
ಶೋಷಿತರ ಕಣ್ಣೀರನ್ನು ಒರೆಸುವ ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾಶಕ್ತಿಯಾಗಿರುವ ಯೇಸು ಜಗದ ದುಃಖವನ್ನು ತೊಡೆಯಲು ಶಕ್ತನಾಗಿದ್ದಾರೆ. ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುವಿನ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳು ಔಷದವಾಗಬೇಕು. ಯೇಸು ಕ್ರಿಸ್ತರು ಶಿಲುಬೆಯನ್ನು ಹೊತ್ತು ನಡೆದಂತೆ ನಾವೂ ಜೀವನದಲ್ಲಿ ಎದುರಾಗುವ ಕಷ್ಟ, ನೋವು ಸಂಕಟಗಳನ್ನು ಎದುರಿಸಿ ಮುನ್ನಡೆಯಬೇಕಿದೆ. ಸ್ವಾರ್ಥ ತ್ಯಜಿಸಿ ಪರರ ಪ್ರೀತಿಯಲ್ಲಿ ಬದುಕಲು ದೇವರು ತೋರಿರುವ ದಾರಿಯೇ ಶಿಲುಬೆಯ ಹಾದಿಯಾಗಿದೆ ಎಂದರು.
ಜಿಲ್ಲೆಯ ಕೆಲವು ಚರ್ಚುಗಳಲ್ಲಿ ಯೇಸುಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನುಪ್ಪುವ ಘಟನಾವಳಿಗಳನ್ನು ಪ್ರಸ್ತುತ ಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾಬಟ್ಟೆ ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ವೃತ್ತಾಂತ ಓದಿದರು. ಬಳಿಕ ಮುಚ್ಚಲ್ಪಟ್ಟ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಅನಾವರಣಗೊಳಿಸಲಾಯಿತು.