ಉಡುಪಿ: ಉಡುಪಿ ತುಳುಕೂಟದ 22ನೇ ವರ್ಷದ ಕೆಮ್ತೂರು ದೊಡ್ಡಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬಕ್ಕೆ ಉಡುಪಿ ಎಂಜಿಎಂ ಕಾಲೇಜಿನ ನವೀಕರಣಗೊಂಡ ಮುದ್ದಣ ಮಂಟಪದಲ್ಲಿ ಇಂದು ಸಂಜೆ ಚಾಲನೆ ನೀಡಲಾಯಿತು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ, ಎಂಜಿಎಂ ಕಾಲೇಜು ಉಡುಪಿ, ಅಖಿಲ ಭಾರತ ತುಳು ಒಕ್ಕೂಟ ಕುಡ್ಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವುಗಳ ಸಹಯೋಗದಲ್ಲಿ ಒಂದು ವಾರ ಕಾಲ ಕೆಮ್ತೂರು ದೊಡ್ಡಣ ಶೆಟ್ರ ಸ್ಮಾರಕಾರ್ಥ ಈ ನಾಟಕ ಹಬ್ಬ ನಡೆಯಲಿದೆ. ಇದರಲ್ಲಿ ಈ ಬಾರಿ ಒಟ್ಟು ಏಳು ನಾಟಕಗಳು ಪ್ರದರ್ಶನ ನೀಡಲಿವೆ.
ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ತುಳುಕೂಟ ತುಳುವರ ಆಸ್ತಿ. ತುಳು ಭಾಷೆಯ ಆಚಾರ-ವಿಚಾರವನ್ನು ಎತ್ತಿ ಹಿಡಿಯುವ ಕೆಲಸವನ್ನು ತುಳುಕೂಟ ಮಾಡುತ್ತಿದೆ. ಕಳೆದ 22 ವರ್ಷಗಳಿಂದ ನಾಟಕ ಹಬ್ಬವನ್ನು ಆಯೋಜಿಸಿ ಅನೇಕ ಕಲಾವಿದರು, ಕಲಾ ತಂಡಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ತುಳುಕೂಟ ಪುಣೆಯ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೆಮ್ತೂರು ಕುಟುಂಬದ ವಿಜಯ ಕುಮಾರ್ ಶೆಟ್ಟಿ, ನಾಟಕ ಪರ್ಬದ ಸಂಚಾಲಕ ಬಿ. ಪ್ರಭಾಕರ ಭಂಡಾರಿ, ಪ್ರಮುಖರಾದ ಚೈತನ್ಯ ಎಂ.ಜಿ., ಮನೋರಮಾ ಉಪಸ್ಥಿತರಿದ್ದರು.
ಭುವನ ಪ್ರಸಾದ್ ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಡಾ.ವಿ.ಕೆ.ಯಾದವ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರೆ, ಯಶೋಧಾ ಕೇಶವ ಸನ್ಮಾನಿತರ ಪಟ್ಟಿ ವಾಚಿಸಿದರು.
ಕಾರ್ಯಕ್ರಮದಲ್ಲಿ ನಿನ್ನೆ ನಿಧನರಾದ ತುಳು ವಿದ್ವಾಂಸ ಅಮೃತ ಸೋಮೇಶ್ವರ ಹಾಗೂ ದಿ. ಲೀಲಾಧರ ಶೆಟ್ಟಿ ಕಾಪು ಅವರನ್ನು ಸ್ಮರಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಸ್ಪರ್ಧೆಯ ಮೊದಲ ದಿನದ ಪುತ್ತೂರು ಉಬರ್ನ ಗಯಾಪದ ಕಲಾವಿದೆರ್ ತಂಡ ಶಶಿಕುಮಾರ್ ಕೂಳೂರು ಮಂಜೇಶ್ವರ ನಿರ್ದೇಶನದಲ್ಲಿ ‘ಮುರಳಿ ಈ ಪಿರ ಬರೊಲಿ’ ನಾಟಕವನ್ನು ಪ್ರದರ್ಶಿಸಿತು.