Home Uncategorized ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷ್ಕ್ರಿಯ ಪಶು ಇಲಾಖೆ, 13 ಸಂಚಾರಿ ಪಶು ಸಂಜೀವಿನಿ ಅಂಬ್ಯುಲೆನ್ಸ್‌ಗಳಿಗೆ ಸಿಬ್ಬಂದಿ...

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷ್ಕ್ರಿಯ ಪಶು ಇಲಾಖೆ, 13 ಸಂಚಾರಿ ಪಶು ಸಂಜೀವಿನಿ ಅಂಬ್ಯುಲೆನ್ಸ್‌ಗಳಿಗೆ ಸಿಬ್ಬಂದಿ ಕೊರತೆ

39
0

ರಾಜ್ಯ ಸರ್ಕಾರ ಪಶು ಚಿಕಿತ್ಸೆಗೆ (veterinary) ಅನುಕೂಲವಾಗಲಿ ಎನ್ನುವ ಉದ್ದೇಶದಿಂದ 44 ಕೋಟಿ ವೆಚ್ಚದಲ್ಲಿ ಒಂದು ಲಕ್ಷ ಪಶುಗಳಿರುವ ಸ್ಥಳಗಳಿಗೆ ಒಂದು ಅಂಬ್ಯುಲೆನ್ಸ್‌ನಂತೆ ಉತ್ತರ ಕನ್ನಡ ಜಿಲ್ಲೆಗೆ 13 ಅಂಬ್ಯುಲೆನ್ಸ್‌ಗಳನ್ನ ನೀಡಿತ್ತು. ಪಶು ಅಂಬ್ಯುಲೆನ್ಸ್‌ಗಳ (Animal Ambulance) ಆಗಮನದಿಂದ ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಪಶುಪಾಲಕರು ಅಂದುಕೊಂಡಿದ್ದರು. ಆದರೆ ಸೂಕ್ತ ಸಿಬ್ಬಂದಿ, ಚಾಲಕರಿಲ್ಲದೇ ನೂತನ ಅಂಬ್ಯುಲೆನ್ಸ್‌ಗಳು ಕಾರ್ಯಾರಂಭವನ್ನೇ ಮಾಡಿಲ್ಲವಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಕೆಲ ತಿಂಗಳ ಹಿಂದಷ್ಟೇ ಪಶು ಸಂಜೀವಿನಿ ಅಂಬ್ಯುಲೆನ್ಸ್‌ನ್ನು ಉದ್ಘಾಟನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ತ್ವರಿತ ಚಿಕಿತ್ಸೆ ಒದಗಿಸಲು ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಛದಲ್ಲಿ ಅಂಬ್ಯುಲೆನ್ಸ್‌ಗಳನ್ನ ನೀಡಲಾಗಿತ್ತು. ಆದರೆ ಉದ್ಘಾಟನೆ ನಂತರ ಅಂಬ್ಯುಲೆನ್ಸ್‌ಗಳು ಕೆಲಸ ಆರಂಭಿಸಲು ಇದುವರೆಗೂ ಸಹ ಮುಹೂರ್ತವೇ ಕೂಡಿಬಂದಿಲ್ಲ. ಸಿಬ್ಬಂದಿ ಚಾಲಕರ ಕೊರತೆ ಜೊತೆಗೆ ವೈದ್ಯರ ಕೊರತೆಯಿಂದ ಜಿಲ್ಲೆಯಲ್ಲಿ ಸಂಚಾರಿ ಪಶು ಅಂಬ್ಯುಲೆನ್ಸ್‌ಗಳು ಆಸ್ಪತ್ರೆಯ ಆವರಣದಲ್ಲೇ ತುಕ್ಕು ಹಿಡಿಯಲು ನಿಂತಿವೆ.

ಪಶು ಇಲಾಖೆ ನೀಡಿದ ತುರ್ತು ಸೇವಾ ನಂಬರ್‌ಗೆ ಕರೆ ಮಾಡಿದರೆ ಅಂಬ್ಯುಲೆನ್ಸ್ ಸೇವೆ ತಾತ್ಕಾಲಿಕವಾಗಿ ಇಲ್ಲ ಎಂಬ ಉತ್ತರ ದೊರೆಯುತ್ತಿದೆ. ಜಿಲ್ಲೆಯ ಹೆದ್ದಾರಿಗಳಲ್ಲಿ ಜಾನುವಾರುಗಳಿಗೆ ಅಪಘಾತವಾದರೆ ತುರ್ತು ಸೇವೆ ಸಿಗುತ್ತಿಲ್ಲ. ಜೊತೆಗೆ ಪಶುಗಳಿಗೆ ರೋಗರುಜಿನಗಳು ಬಂದರೂ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ.

ಇದಲ್ಲದೇ ಪಶು ಔಷಧಗಳ ಕೊರತೆ ಸಹ ಇದ್ದು ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸಂಚಾರಿ ಪಶು ಸಂಜೀವಿನಿ ಅಂಬ್ಯುಲೆನ್ಸ್ ನೀಡಿಯೂ ಪ್ರಯೋಜನಕ್ಕೆ ಬಾರದಂತಾಗಿದ್ದು ಇದೀಗ ಗೋಪಾಲಕರು ಸರ್ಕಾರದ ಕಾರ್ಯವೈಖರಿಯನ್ನ ಖಂಡಿಸುತ್ತಿದ್ದಾರೆ.. ಜೊತೆಗೆ ಗೋವುಗಳನ್ನ ಸಾಕಲು ಮೇವಿನ ಕೊರತೆ ಇದೆ.. ಹೀಗಾಗಿ ಅವುಗಳನ್ನ ಕೊಟ್ಟಿಗೆ ಬಿಟ್ಟು ಅರಣ್ಯದ ಕಡೆ ಬಿಡುವ ಅನಿವಾರ್ಯತೆ ಇದೆ, ಇದರಿಂದ ಗೋವುಗಳು ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನು ಪಶುಸಂಗೋಪನಾ ಇಲಾಖೆ ಕೇಂದ್ರ ಸರ್ಕಾರದ ಶೇ. 60 ರಾಜ್ಯ ಸರ್ಕಾರದಿಂದ ಶೆ. 40 ರಷ್ಟು ಅನುದಾನದಲ್ಲಿ ಯೋಜನೆಯನ್ನ ಜಾರಿಗೆ ತಂದಿದೆ. ಆದರೆ ಇದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಯನ್ನ ರಾಜ್ಯ ಸರ್ಕಾರ ಮಾಡದೇ ನಿರ್ಲಕ್ಷ ತೋರಿದೆ. ಇನ್ನು ಅಂಬ್ಯುಲೆನ್ಸ್‌ಗೆ ಜಿಲ್ಲೆಯಲ್ಲಿ 39 ಸಿಬ್ಬಂದಿ ಅಗತ್ಯವಿದ್ದು, ಗುತ್ತಿಗೆ ಆಧಾರದಲ್ಲಿ ಈವರೆಗೂ ನೇಮಕ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದಲ್ಲದೇ ಬಿಡ್ ಸಲ್ಲಿಸಲು ಸಹ ಯಾವ ಸಂಸ್ಥೆಯೂ ಆಸಕ್ತಿ ತೋರುತ್ತಿಲ್ಲ.

ಜಿಲ್ಲೆಯಲ್ಲಿ ಶೇ. 69 ರಷ್ಟು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಜಿಲ್ಲೆಯ ಕುಮಟಾ, ಹೊನ್ನಾವರ, ಶಿರಸಿ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ ಭಾಗದಲ್ಲಿ ಹೆಚ್ಚು ಗೋಸಾಕಾಣಿಕೆ ಇದ್ದು ವೈದ್ಯರು ಸಿಬ್ಬಂದಿಗಳಿಲ್ಲದೇ ಖಾಸಗಿ ವೈದ್ಯರನ್ನ ಭೇಟಿಯಾಗಿ ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನ ಕೇಳಿದ್ರೆ ಇನ್ನೊಂದು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಿ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೇ ಸರ್ಕಾರ ಪಶುಪಾಲನೆಗೆ ಹಲವು ಯೋಜನೆಯನ್ನ ಜಾರಿಗೆ ತರುತ್ತಿದೆ. ಆದರೆ ಅವುಗಳ ಅನುಷ್ಠಾನಕ್ಕೆ ಬೇಕಾದ ವ್ಯವಸ್ಥೆ ಒದಗಿಸದೇ ನಿರ್ಲಕ್ಷ್ಯ ಮಾಡುವ ಕಾರಣ ಜನರ ಕೋಟಿಗಟ್ಟಲೇ ತೆರಿಗೆ ಹಣ ಸದುಪಯೋಗವಾಗದೇ ವ್ಯರ್ಥವಾಗಿ ಹೋಗುವಂತಾಗಿದೆ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)

Also Read:
ಗಡಿ ಜಿಲ್ಲೆ ಬೀದರ್​ ಮತ್ತೊಂದು ಬಳ್ಳಾರಿಯಾಗುವತ್ತ ಸಾಗುತಿದೆ, ಇಲ್ಲಿ ಜೋರಾಗಿ ನಡೆಯುತ್ತಿದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ

Also Read:
ಕೊಟ್ರಮ್ಮನ ಹೆದ್ದಾರಿ ಸ್ಟೋರಿ: ತನ್ನ ಬೆಳೆಯನ್ನು ನುಂಗುತ್ತಿದ್ದ ಬೃಹತ್ ಲಾರಿಗಳನ್ನು ತಡೆದು ನಿಲ್ಲಿಸಿದ ಏಕಾಂಗಿ ಮಹಿಳೆಯ ಕಥೆ ಇದು!

LEAVE A REPLY

Please enter your comment!
Please enter your name here