ಕನೌಜ್: ರೌಡಿಶೀಟರ್ ನನ್ನು ಬಂಧಿಸಲು ಆಗಮಿಸಿದ ಪೊಲೀಸರ ಮೇಲೆ ಆತನ ಕುಟುಂಬದ ಸದಸ್ಯರು ಗುಂಡುಹಾರಿಸಿದ್ದು, ಓರ್ವ ಕಾನ್ಸ್ಟೇಬಲ್ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಕನೌಜ್ ನಲ್ಲಿ ನಡೆದಿದೆ.
ಗುಂಡೇಟಿಗೆ ಬಲಿಯಾದ ಪೊಲೀಸ್ ಕಾನ್ಸ್ಟೇಬಲ್ ನನ್ನು ಸಚಿನ್ ರಥಿ (28) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಆತನನ್ನು ಕಾನ್ಪುರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆಂದು ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.
ಆಶೋಕ್ ಕುಮಾರ್ ಓರ್ವ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ 20 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಹಾಗೂ ಆತನ ಬಂಧನಕ್ಕೆ ಜಾಮೀನು ರಹಿತ ಜಾರಿಗೊಳಿಸಲಾಗಿತ್ತು.
ಅಶೋಕ್ ಕುಮಾರ್ ಮನೆಯಲ್ಲಿದ್ದಾನೆಂಬ ಮಾಹಿತಿ ಸೋಮವಾರ ಪೊಲೀಸರಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಛಿಬ್ರಮಾವು ಹಾಗೂ ವಿಷ್ಣುಘರ್ ಠಾಣೆಗಳ ಪೊಲೀಸರ ಜಂಟಿ ತಂಡವೊಂದು ಧರಣಿ ಧೀರಪುರ ನಗರಿಯಾ ಗ್ರಾಮದಲ್ಲಿರುವ ಆತನ ಮನೆಗೆ ಧಾವಿಸಿತ್ತು.
ತನ್ನ ಮನೆಯನ್ನು ಸುತ್ತುವರಿದ ಪೊಲೀಸ್ ತಂಡದ ಮೇಲೆ ಅಶೋಕ್ ಕುಮಾರ್, ಆತನ ಪತ್ನಿ ಹಾಗೂ ಪುತ್ರ ಮನಬಂದಂತೆ ಗುಂಡು ಹಾರಿಸಿದ್ದಾರೆಂದು ಆನಂದ್ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಪೊಲೀಸರು ಕ್ರಿಮಿನಲ್ ಆರೋಪಿ ಅಶೋಕ್ ಕುಮಾರ್ ಯಾನೆ ಮುನ್ನಾ ಯಾದವ್ ಹಾಗೂ ಆತನ ಪುತ್ರನಿಗೆ ಗುಂಡಿಕ್ಕಿ ಗಾಯಗೊಳಿಸಿದ್ದಾರೆ ಹಾಗೂ ಅವರಿಬ್ಬರನ್ನು ಕನೌಜ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶೋಕ್ ಕುಮಾರ್ ಹಾಗೂ ಆತನ ಪುತ್ರ ಪೊಲೀಸರ ಮೇಲೆ ಗುಂಡು ಹಾರಾಟಕ್ಕೆ ಬಳಸಿದ ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಮನೆಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಎರಡು ಕೊಳವೆಯ ರೈಫಲ್ ಕೂಡಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.