ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ಇಎಬಿ)ಯು ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ಇಎಬಿ)ಯು ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ಫೆಬ್ರವರಿ 23 ರಿಂದ ಮಾರ್ಚ್ 1 ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು, ನಂತರ ಅದನ್ನು ಪರಿಷ್ಕರಿಸಲಾಯಿತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಈ ಪರೀಕ್ಷೆಗಳು ಫೆಬ್ರವರಿ 27 ಮತ್ತು ಮಾರ್ಚ್ 4 ರ ನಡೆಯಲಿವೆ.
ಮಾರ್ಗಸೂಚಿಗಳ ಪ್ರಕಾರ, ಪ್ರಶ್ನೆ ಪತ್ರಿಕೆಗಳನ್ನು ಸಂಬಂಧಿತ ಬ್ಲಾಕ್ ಶಿಕ್ಷಣ ಅಧಿಕಾರಿಗಳಿಗೆ ನೀಡಲಾಗುತ್ತದೆ, ಅವರು ಪ್ರಶ್ನೆ ಪತ್ರಿಕೆಗಳನ್ನು ಬಿಗಿ ಭದ್ರತೆಯಲ್ಲಿ ಇರಿಸುವಂತೆ ಹಾಗೂ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ವಿತರಿಸುವ ಕೆಲಸ ಮಾಡಬೇಕೆಂದು ತಿಳಿಸಲಾಗಿದೆ.
ಪರೀಕ್ಷೆಗೆ ಪ್ರತೀ ವಿದ್ಯಾರ್ಥಿಯಿಂದ 50 ರೂ. ಸಂಗ್ರಹಿಸಿ ಆಯಾ ಶಾಲಾ ಪ್ರಾಂಶುಪಾಲರು ಬಿಇಒಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಬಿಇಒಗಳು ಪರೀಕ್ಷಾ ಶುಲ್ಕ ಸ್ವೀಕರಿಸಿದ ಮತ್ತು ಪರೀಕ್ಷಾ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕಪತ್ರ ನಿರ್ವಹಿಸಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಆದೇಶಿಸಲಾಗಿದೆ. ಈ ಹಿಂದೆ ಪ್ರತೀ ವಿದ್ಯಾರ್ಥಿಗೆ 60 ರೂ. ಶುಲ್ಕ ವಿಧಿಸಿ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ 50 ರೂ. ವಿಧಿಸಲಾಗಿದೆ.
ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಇಂತಿದೆ…
ಫೆಬ್ರವರಿ 27 – ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( ಎನ್ ಸಿ ಇ ಆರ್ ಟಿ), ಸಂಸ್ಕೃತ.
ಫೆಬ್ರವರಿ 28 – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ.
ಮಾರ್ಚ್ 1 – ತೃತೀಯ ಭಾಷೆ – ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು.
ಮಾರ್ಚ್ 2 – ಗಣಿತ
ಮಾರ್ಚ್ 3 – ವಿಜ್ಞಾನ
ಮಾರ್ಚ್ 4 – ಸಮಾಜ ವಿಜ್ಞಾನ