ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ದೇಶದಲ್ಲಿ ಏಕಕಾಲಿಕ ಚುನಾವಣೆಗಳನ್ನು ಸಾಧ್ಯವಾಗಿಸಲು ಪ್ರಸ್ತುತ ಕಾನೂನು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಶುಕ್ರವಾರ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.
ಬಹಿರಂಗ ನೋಟಿಸ್ ನಲ್ಲಿ ಸಮಿತಿಯು ತನ್ನ ವೆಬ್ಸೈಟ್ ಮೂಲಕ ಅಥವಾ ಇ-ಮೇಲ್ ಮೂಲಕ ಲಿಖಿತ ಸಲಹೆಗಳನ್ನು ಕಳುಹಿಸುವಂತೆ ಸಾರ್ವಜನಿಕರನ್ನು ಆಹ್ವಾನಿಸಿದೆ. ಜ.15ರೊಳಗೆ ಸ್ವೀಕೃತ ಎಲ್ಲ ಸಲಹೆಗಳನ್ನು ಪರಿಗಣನೆಗಾಗಿ ಸಮಿತಿಯ ಮುಂದಿಡಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
2023, ಸೆ.2ರಂದು ರಚನೆಗೊಂಡ ಬಳಿಕ ಸಮಿತಿಯು ಎರಡು ಸಭೆಗಳನ್ನು ನಡೆಸಿದ್ದು, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಆಹ್ವಾನಿಸಿತ್ತು.
ವಿಚಾರಣಾ ನಿಬಂಧನೆಗಳಂತೆ ಸಮಿತಿಯು ಭಾರತದ ಸಂವಿಧಾನದಡಿ ಹಾಲಿ ಮಾರ್ಗಸೂಚಿಗಳನ್ನು ಮತ್ತು ಇತರ ಶಾಸನಬದ್ಧ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ,ರಾಜ್ಯ ವಿಧಾನಸಭೆಗಳು, ನಗರಸಭೆಗಳು ಮತ್ತು ಪಂಚಾಯತ್ ಗಳಿಗೆ ಏಕಕಾಲಿಕ ಚುನಾವಣೆಗಳನ್ನು ನಡೆಸುವ ಕುರಿತು ಪರಿಶೀಲಿಸಿ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕಿದೆ. ಏಕಕಾಲಿಕ ಚುನಾವಣೆಗಳನ್ನು ನಡೆಸಲು ಸಂವಿಧಾನ,ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ಪರಿಶೀಲನೆ ಮತ್ತು ತಿದ್ದುಪಡಿಗಳು ಅಗತ್ಯವಿರುವ ಇತರ ಯಾವುದೇ ನಿಯಮಗಳನ್ನು ಸಮಿತಿಯು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕಿದೆ.
ಸಂವಿಧಾನಕ್ಕೆ ಅಗತ್ಯ ತಿದ್ದುಪಡಿಗಳಿಗೆ ರಾಜ್ಯಗಳ ದೃಢೀಕರಣ ಅಗತ್ಯವೇ ಮತ್ತು ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವುದನ್ನೂ ಸಮಿತಿಯು ಪರಿಶೀಲಿಸುತ್ತಿದೆ.