ಕನ್ನಡ ಬೋಧನೆ ಕೈಬಿಟ್ಟಿಲ್ಲ, ಈ ಕುರಿತ ಸುದ್ದಿಗಳು ಸುಳ್ಳು ಎಂದು ಸೋಫಿಯಾ ಶಾಲೆ ಸ್ಪಷ್ಟನೆ ನೀಡಿದೆ. ಬೆಂಗಳೂರು: ಕನ್ನಡ ಬೋಧನೆ ಕೈಬಿಟ್ಟಿಲ್ಲ, ಈ ಕುರಿತ ಸುದ್ದಿಗಳು ಸುಳ್ಳು ಎಂದು ಸೋಫಿಯಾ ಶಾಲೆ ಸ್ಪಷ್ಟನೆ ನೀಡಿದೆ.
ಪೋಷಕರ ಆಗ್ರಹದ ಮೇರೆಗೆ ಕನ್ನಡ ಕೈಬಿಡುವ ಕುರಿತು ನಗರದ ಸೋಫಿಯಾ ಶಾಲೆ ಚಿಂತನೆ ನಡೆಸುತ್ತಿದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕನ್ನಡ ಕೈಬಿಡುವಂತೆ ಇಲಾಖೆಗೆ ಆಗ್ರಹಿಸುವಂತೆ ಪೋಷಕರ ಮೇಲೆ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಅಲ್ಪನಾ ಅವರು ಒತ್ತಡ ಹೇರುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು, ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದರು.
ಆರೋಪಗಳ ಬಗ್ಗೆ ಮಾಹಿತಿ ಇತ್ತು. ಆದರೆ, ಕನ್ನಡ ಕೈಬಿಡುತ್ತಿರುವ ಕುರಿತು ಯಾವುದೇ ಔಪಚಾರಿಕ ಪತ್ರವಾಗಲೀ, ದೂರುಗಳಾಗಲಿ ಇಲಾಖೆಗೆ ಬಂದಿರಲಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಡಿಎಸ್ಇಎಲ್) ಮೂಲಗಳು ತಿಳಿಸಿವೆ.
ಈ ಎಲ್ಲಾ ಬೆಳವಣಿಗೆ, ಆರೋಪಗಳ ಕುರಿತು ಕೊನೆಗೂ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಅಲ್ಪನಾ ಅವರು ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಭಾಷಾ ಕಲಿಕೆಯ ನಿಯಮಗಳು, 2017 ರ ಪ್ರಕಾರ, ನಾವು ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡವನ್ನು ಎರಡನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸುತ್ತಿದ್ದೇವೆ. ಕನ್ನಡವನ್ನು ಎರಡನೇ ಭಾಷೆಯನ್ನಾಗಿ ಕೈಬಿಡುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಸುಳ್ಳು. ಇದು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದಾರೆ.