Home Uncategorized ಕರೂರು ಟು ಕೊರಿಯಾ; 14 ಸಾವಿರ ರೂ.ಗಳೊಂದಿಗೆ ಖ್ಯಾತ BTS ತಂಡವನ್ನು ಭೇಟಿ ಮಾಡಲು ಹೊರಟ...

ಕರೂರು ಟು ಕೊರಿಯಾ; 14 ಸಾವಿರ ರೂ.ಗಳೊಂದಿಗೆ ಖ್ಯಾತ BTS ತಂಡವನ್ನು ಭೇಟಿ ಮಾಡಲು ಹೊರಟ ಅಪ್ರಾಪ್ತೆಯರು!

27
0

ಚೆನ್ನೈ: ಸಾಮಾಜಿಕ ತಾಣಗಳಲ್ಲಿ ಸಕ್ರೀಯವಾಗಿರುವ ಕೊರಿಯಾ ಮೂಲದ BTS ಸಂಗೀತಗಾರರ ತಂಡವನ್ನು ಭೇಟಿ ಮಾಡಲು, ಪಾಸ್ ಪೋರ್ಟ್ ಗಳಿಲ್ಲದೇ ಕೇವಲ 14 ಸಾವಿರ ರೂ. ಹಿಡಿದುಕೊಂಡು ಹೊರಟ ಮೂವರು ಅಪ್ರಾಪ್ತೆಯರನ್ನು ತಮಿಳುನಾಡಿನ ಕರೂರಿನಲ್ಲಿ ರಕ್ಷಣೆ ಮಾಡಲಾದ ಘಟನೆ ವರದಿಯಾಗಿದೆ.

ಮೂವರು ಅಪ್ರಾಪ್ತ ಹುಡುಗಿಯರು, 13 ವರ್ಷ ವಯಸ್ಸಿನವರು, ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿಗಳು, ತಮ್ಮ ನೆಚ್ಚಿನ ತಾರೆಯರನ್ನು ಭೇಟಿ ಮಾಡಲು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ಗೆ ಹೋಗಲು ನಿರ್ಧರಿಸಿದ್ದರು ಎನ್ನಲಾಗಿದೆ.

“ಮೂವರು ಹೇಗಾದರೂ ಮಾಡಿ ಬಿಟಿಎಸ್ ತಾರೆಗಳನ್ನು ಭೇಟಿಯಾಗುವ ದೃಢ ನಿರ್ಧಾರವನ್ನು ಮಾಡಿದ್ದರು. ದಕ್ಷಿಣ ಕೊರಿಯಾಕ್ಕೆ ಹಡಗಿನ ಮೂಲಕ ಹೋಗಲು ತಮಿಳುನಾಡಿನ ತೂತುಕುಡಿ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಂದರುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅಂತಿಮವಾಗಿ ವಿಶಾಖಪಟ್ಟಣಂನಿಂದ ಯೋಜನೆ ಹಾಕಿಕೊಂಡರು ” ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಅಪ್ರಾಪ್ತೆಯರು ಜನವರಿ 4 ರಂದು ಸದ್ದಿಲ್ಲದೆ ಕರೂರಿನ ತಮ್ಮ ಮನೆಗಳಿಂದ ಹೊರಬಂದು, ಈರೋಡ್‌ನಿಂದ ರೈಲಿನಲ್ಲಿ ಚೆನ್ನೈ ತಲುಪಿದರು. ಬಾಲಕಿಯರು ನಾಪತ್ತೆಯಾದ ಕಾರಣ, ಅವರ ಪೋಷಕರು ಕರೂರು ಪೊಲೀಸರಿಗೆ ದೂರು ನೀಡಿದರು. ಅವರು ಕೂಡಲೇ ರಾಜ್ಯಾದ್ಯಂತ ಮಾಹಿತಿ ರವಾನಿಸಿ, ಹುಡುಕಾಟ ಆರಂಭಿಸಿದರು ಎಂದು ತಿಳಿದು ಬಂದಿದೆ.

ಅಪ್ರಾಪ್ತೆಯರು ತಮ್ಮ ಬಳಿ ಕೇವಲ 14,000 ರೂಪಾಯಿ ಪಾಕೆಟ್ ಮನಿ ಇದ್ದರೂ, ತಾವು ದಕ್ಷಿಣ ಕೊರಿಯಾ ತಲುಪಬಹುದು ಎಂದು ನಂಬಿದ್ದರು. ಬಹಳ ಕಷ್ಟಪಟ್ಟು ಕಳೆದ ಗುರುವಾರ ರಾತ್ರಿ ಚೆನ್ನೈನ ಹೊಟೇಲ್‌ನಲ್ಲಿ ರೂಮ್ ಪಡೆದಿದ್ದರು. ತಮ್ಮ ಕನಸಿನ ಸಿಯೋಲ್ ಪ್ರಯಾಣಕ್ಕೆ ಹಡಗಿನಲ್ಲಿ ಪಾಸ್ ಪೋರ್ಟ್ ಬೇಕಾಗಿಲ್ಲ ಎಂಬ ಅಚಲ ನಂಬಿಕೆ ಅವರಲ್ಲಿತ್ತು ಎನ್ನಲಾಗಿದೆ.

ಶುಕ್ರವಾರ, ಅವರು ತಮ್ಮೆಲ್ಲಾ ಶ್ರಮ ಹಾಕಿ ಪ್ರಯಾಣವನ್ನು ಮುಂದುವರೆಸುವ ಪ್ರಯತ್ನ ಮಾಡಿದರಾದರೂ, ಅದು ಫಲಪ್ರದವಾಗದಿದ್ದಾಗ ಹತಾಶೆಯಿಂದ, ಯಾವುದೇ ಆಯ್ಕೆಯಿಲ್ಲದೆ, ಅವರು ತಮ್ಮ ಮನೆಗಳನ್ನು ತಲುಪಲು ಚೆನ್ನೈನಿಂದ ರೈಲು ಹತ್ತಿದರು ಎಂದು ತಿಳಿದು ಬಂದಿದೆ.

“ಕಟಪಾಡಿ ರೈಲ್ವೇ ನಿಲ್ದಾಣದಲ್ಲಿ ಅವರು ಮಧ್ಯರಾತ್ರಿ ಆಹಾರ ಖರೀದಿಸಲು ಇಳಿದಾಗ ರೈಲು ಅವರನ್ನು ಬಿಟ್ಟು ಚಲಿಸಿತ್ತು. ಅವರನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ, ಕೂಡಲೇ ಎಚ್ಚೆತ್ತುಕೊಂಡರು. ಚೈಲ್ಡ್ ಲೈನ್ ಅಧಿಕಾರಿಗಳೊಂದಿಗೆ ಮಾತನಾಡಿ ಅವರನ್ನು ಸುಪರ್ದಿಗೊಪ್ಪಿಸಿದರು” ಎಂದು ವೆಲ್ಲೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಖ್ಯಸ್ಥ ಪಿ ವೇದನಾಯಗಂ ತಿಳಿಸಿದ್ದಾರೆ.

ಬಳಿಕ ವೆಲ್ಲೂರು ಜಿಲ್ಲೆಯ ಸರ್ಕಾರಿ ಸೌಲಭ್ಯದಲ್ಲಿ ಅವರಿಗೆ ವಸತಿ ಕಲ್ಪಿಸಿ, ಅವರ ಪೋಷಕರನ್ನು ಕರೆಸಲಾಯಿತು. ಮಕ್ಕಳು ಮತ್ತು ಅವರ ಪೋಷಕರಿಗೆ ಕೌನ್ಸೆಲಿಂಗ್ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯರು BTS ಬ್ಯಾಂಡ್ ಮತ್ತು ಸ್ಟಾರ್ ಗಳ ಬಗ್ಗೆ, ಅವರು ಧರಿಸುವ ಧಿರಿಸುಗಳಿಂದ ಪ್ರಭಾವಿತರಾಗಿದ್ದರು. ಅವರ ಬ್ಯಾಂಡ್ ವಿವರಗಳನ್ನು ತಿಳಿದುಕೊಂಡಿದ್ದರು. ಜೊತೆಗೆ ಪಾಪ್ ಬ್ಯಾಂಡ್ ತಾರೆಗಳು ಬಳಸುವಂತಹ ಶೂಗಳನ್ನು ಖರೀದಿಸಿದ್ದರು. ಸ್ಮಾರ್ಟ್ ಫೋನ್ ಗಳನ್ನು ಹೆಚ್ಚಾಗಿ ಬಳಸುವ ಗೀಳು ಮಕ್ಕಳಿಗಿದ್ದುದರಿಂದ BTS ಬ್ಯಾಂಡ್ನ ಸಂಗೀತವನ್ನು ಅವರು ವೀಕ್ಷಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ನೃತ್ಯ ಮತ್ತು ಸಂಗೀತದ ಸೆಳೆತವಿರುವುದು ಸ್ಪಷ್ಟವಾಗಿದೆ. ಆದಾಗ್ಯೂ, ಅವರ ಕನಸುಗಳನ್ನು ಬೆನ್ನಟ್ಟಲು ಅವರ ‘ವಿದೇಶಕ್ಕೆ ಹೋಗುವ’ ನಿರ್ಧಾರ ಭಯಾನಕ ತಪ್ಪು ಎಂಬುದನ್ನು ಅವರಿಗೆ ನಯವಾಗಿ ತಿಳಿಸಲಾಯಿತು” ಎಂದು ಅಧಿಕಾರಿಗಳು ಹೇಳಿದರು.

“ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವ ಅಧ್ಯಯನದತ್ತ ಮಾತ್ರ ಗಮನಹರಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ಮಕ್ಕಳಿಗೆ ಶಿಕ್ಷಣದ ಮಹತ್ವ ಮತ್ತು ಅದರ ಮೌಲ್ಯವನ್ನು ತಿಳಿಸಿ, ಮಕ್ಕಳು ಏನು ಮಾಡುತ್ತಾರೆ ಎಂಬುದರ ಮೇಲೆ ನಿಗಾ ಇಡುವಂತೆ ಪೋಷಕರಿಗೆ ಸಲಹೆ ನೀಡಿದ್ದೇವೆ. ಹದಿಹರೆಯದವರಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್ನೆಟ್ಗಳನ್ನು ಶಿಕ್ಷಣ ಸಂಬಂಧಿತ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕೆಂದು ಹೇಳಲಾಯಿತು” ಮಕ್ಕಳ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

“ಈ ಮಕ್ಕಳ ಕೌಟುಂಬಿಕ ಹಿನ್ನೆಲೆಯನ್ನೂ ನಿರ್ಲಕ್ಷಿಸುವಂತಿಲ್ಲ. ಒಂದು ಹೆಣ್ಣು ಮಗುವಿಗೆ ಒಬ್ಬರು ಪೋಷಕರು ಮಾತ್ರ ಇದ್ದಾರೆ. ಮತ್ತೊಬ್ಬ ಹುಡುಗಿಯ ತಂದೆ ಮಾನಸಿಕ ಅಸ್ವಸ್ಥ. ಇನೋರ್ವಳ ಪೋಷಕರು ಕೃಷಿ ಕೂಲಿ ಕೆಲಸ ಮಾಡುತ್ತಾರೆ. ಮಕ್ಕಳು ಏನು ಬಯಸುತ್ತಾರೆ, ಏನು ಮಾಡುತ್ತಾರೆ ಎಂದು ಅವರಿಗೆ ಮಕ್ಕಳ ಮೇಲೆ ನಿಗಾ ಇಡಲು ಸಮಯವೇ ಇಲ್ಲ” ಎಂದು ಅವರು ಹೇಳಿದರು.

ಪೋಷಕರು ತಮ್ಮ ಮಕ್ಕಳಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡುವಂತೆ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡುವಂತೆ ಮಕ್ಕಳ ಕಲ್ಯಾಣಾಧಿಕಾರಿಗಳು ಮನವಿ ಮಾಡಿದರು. ಕೌನ್ಸೆಲಿಂಗ್ ನಂತರ, ಮಕ್ಕಳನ್ನು ಅವರ ಪೋಷಕರೊಂದಿಗೆ ಅವರ ತವರು ಜಿಲ್ಲೆಗೆ ಜನವರಿ 6 ರಂದು ರಾತ್ರಿ ರೈಲಿನಲ್ಲಿ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here