ಹೊಸದಿಲ್ಲಿ : ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿಯಿಂದಾಗಿ ಕರ್ನಾಟಕದಲ್ಲಿ ನೀರಿನ ಅಭಾವ ಎದುರಾಗಿದೆ. ಆದರೂ ಕೇಂದ್ರದ ಮೋದಿ ಸರಕಾರವು ರಾಜ್ಯದ ಜನರಿಗೆ ನೆರವಾಗಲು ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸೋಮವಾರ ಆರೋಪಿಸಿದ್ದಾರೆ.
ಕೇಂದ್ರದ ವಿರುದ್ಧ ದಾಳಿ ನಡೆಸಿರುವ ಅವರು,‘ಪ್ರಧಾನಿ ನರೇಂದ್ರ ಮೋದಿಯವರು ಇಂದು ಕರ್ನಾಟಕದ ಶಿವಮೊಗ್ಗದಲ್ಲಿದ್ದಾರೆ. ತನ್ನ ಭಾಷಣದಲ್ಲಿ ಅವರು ರಾಜ್ಯದ ಕೆಲವು ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾವಿಸುತ್ತಾರೆ ಮತ್ತು ಪರಿಹಾರವನ್ನು ಸೂಚಿಸುತ್ತಾರೆ ಎಂದು ನಾವು ಆಶಿಸಿದ್ದೇವೆ ’ ಎಂದು ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ರಾಜ್ಯದ 236 ಜಿಲ್ಲೆಗಳ ಪೈಕಿ 223 ಜಿಲ್ಲೆಗಳಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಬರ ಪರಿಹಾರಕ್ಕಾಗಿ 18,172 ಕೋ.ರೂ.ಗಳನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರಕಾರವು ಮೋದಿ ಸರಕಾರವನ್ನು ಕೋರಿಕೊಂಡಿದೆ. ಈವರೆಗೆ ರಾಜ್ಯದ ಜನತೆಗೆ ನೆರವಾಗಲು ಮೋದಿ ಸರಕಾರವು ನಿರಾಕರಿಸಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಗ್ರಾಮೀಣ ಆರ್ಥಿಕತೆಯ ಮೇಲೆ ಬರ ಪರಿಸ್ಥಿತಿಯ ಒತ್ತಡ ನಿವಾರಣೆಗೆ ನೆರವಾಗಲು ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಲು ಕರ್ನಾಟಕ ಸರಕಾರವು ಬಯಸಿದೆ. ಯೋಜನೆಯಡಿ ಬರಗಾಲದ ಅವಧಿಯಲ್ಲಿ ಅದಕ್ಕೆ ಅವಕಾಶವೂ ಇದೆ. ಆದರೆ ಮೋದಿ ಸರಕಾರವು ಯೋಜನೆಯ ವಿಸ್ತರಣೆಯನ್ನು ಅನುಮೋದಿಸಿಲ್ಲ,ನರೇಗಾದಡಿ ಕಾರ್ಮಿಕರ ವೇತನಗಳ ಪಾವತಿಗೆ 1,600 ಕೋ.ರೂ.ಗಳನ್ನು ಬಿಡುಗಡೆ ಮಾಡುವಲ್ಲಿಯೂ ಅದು ವಿಫಲಗೊಂಡಿದೆ ಎಂದು ರಮೇಶ ಹೇಳಿದ್ದಾರೆ.