Home Uncategorized ಕಲೆ ಎಲ್ಲರನ್ನು ಒಗ್ಗೂಟಿಸುವ ಪ್ರಬಲ ಮಾಧ್ಯಮ: ಜಯಂತ್ ಕಾಯ್ಕಿಣಿ

ಕಲೆ ಎಲ್ಲರನ್ನು ಒಗ್ಗೂಟಿಸುವ ಪ್ರಬಲ ಮಾಧ್ಯಮ: ಜಯಂತ್ ಕಾಯ್ಕಿಣಿ

22
0

ಉಡುಪಿ, ಜ.24: ಇಂದಿನ ಮೊಬೈಲ್ ಯುಗದಲ್ಲಿ ಮನುಷ್ಯರಿಗೆ ಮನುಷ್ಯರೇ ಬೇಡವಾಗಿದ್ದಾರೆ. ಇದು ಮನುಷ್ಯರೇ ಮಾಡಿ ಕೊಂಡಿರುವ ಶಾಪ. ಆದರೆ ಯಕ್ಷಗಾನ, ತಾಳಮದ್ದಲೆ, ನಾಟಕದಂತಹ ಕಲೆಗಳನ್ನು ಎಲ್ಲರನ್ನು ಹತ್ತಿರ ವಾಗಿಸುವ ಕೆಲಸ ಮಾಡುತ್ತದೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದ್ದಾರೆ.

ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ನಡೆದ ಸಂಸ್ಕೃತಿ ಉತ್ಸವದಲ್ಲಿ ಪ್ರಭಾವತಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕಲೆ ಸಂಯುಕ್ತ ವಿಕಸನದ ಮಾರ್ಗವಾಗಿದೆ. ಕಲೆ ಎಲ್ಲರನ್ನೂ ಒಂದು ಗೂಡಿಸುವ ಮಾಧ್ಯಮವಾಗಿದೆ. ಸಾಹಿತ್ಯ, ಶಿಕ್ಷಣಗಳು ಜ್ಞಾನವರ್ಜನೆಗೆ ಪೂರಕ ವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ವಿಜ್ಞಾನಿ ನಾಡೋಜ ಪ್ರೊ.ಕೆ.ಪಿ.ರಾವ್ ವಹಿಸಿದ್ದರು. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಭಾಷಣಗ್ಯೆದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಶ್ಚಂದ್ರ, ಪ್ರಭಾವತಿ ಶೆಣೈ ಉಪಸ್ಥಿತರಿದ್ದರು.

ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here