ಉಳ್ಳಾಲ: ಹೆಣ್ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ ಆಗಲೇಬೇಕು. ಆದರೆ ಯಾವುದೇ ಸರಕಾರ ಬಂದರೂ ಅವರ ಬಂಧನ ಆಗುವುದು ಅನುಮಾನ ಎಂದು ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದರು.
ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಳ್ಳಾಲ ಪೌರ ಸಮನ್ವಯ ಸಮಿತಿ ಮಂಗಳವಾರ ಉಳ್ಳಾಲ ಠಾಣೆಗೆ ದೂರು ನೀಡಿದೆ.
ಈ ಸಂದರ್ಭ ಮಾತನಾಡಿದ ಅಬ್ದುಲ್ ರಶೀದ್, ನಾವು ಪ್ರತಿಭಟನೆ ಮಾಡಿ ಅಶಾಂತಿಗೆ ಕಾರಣರಾಗುವುದಿಲ್ಲ. ಯಾವುದೇ ಪ್ರಕರಣ ಶಾಂತಿ, ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಯಬೇಕೆಂದು ಬಯಸುವವರು. ಕಲ್ಲಡ್ಕರ ಹೇಳಿಕೆ ನಮಗೆ ಅತ್ಯಂತ ಹೆಚ್ಚು ನೋವಾದ ಕಾರಣ ಮನವಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಉಳ್ಳಾಲ ನಗರಸಭೆಯ ಮಾಜಿ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಮಾತನಾಡಿ, ಪ್ರಭಾಕರ್ ಭಟ್ ಹೇಳಿಕೆ ಮುಸಲ್ಮಾನರು ಮಾತ್ರವಲ್ಲ, ಎಲ್ಲಾ ಧರ್ಮದವರಿಗೆ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಯೂಸುಫ್ ಉಳ್ಳಾಲ್, ಅಬ್ಬಾಸ್ ಕೋಟೆಪುರ, ಯು.ಎ.ಉಮರ್ ಫಾರೂಕ್, ಮಹಮ್ಮದ್ ತ್ವಾಹಾ, ಹಮೀದ್ ಕೋಡಿ, ಇಬ್ರಾಹಿಂ ಅಶ್ರಫ್, ನವಾಝ್ ಕೋಟೆಪುರ, ಅಬ್ದುಲ್ ರಶೀದ್, ಮಹಮ್ಮದ್ ರಫೀಕ್, ನಝೀರ್ ಎ.ಆರ್., ಅಫ್ರೀದ್ ಕೊಟ್ಟಾರ, ಹನೀಫ್ ಸೋಲಾರ್, ಅಬ್ದುಲ್ ಜಬ್ಬಾರ್, ಮಹಮ್ಮದ್ ಹನೀಫ್, ಕಬೀರ್ ಅಲೇಕಳ, ಫಾರೂಕ್ ಮಂಚಿಲ, ನಾಝಿಂ ಮುಕಚ್ಚೇರಿ ಇನ್ನಿತರರು ಉಪಸ್ಥಿತರಿದ್ದರು.