ಉಡುಪಿ, ಡಿ.28: ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಹಿಂಜಾವೇ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನಿಕ ಕಾನೂನುಗಳನ್ನು ಉಲ್ಲಂಘಿಸುವ ಕೃತ್ಯಗಳನ್ನು ಎಸಗಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪೊಲೀಸ್ ಇಲಾಖೆ ಸ್ವವಿವೇಚನೆಯಿಂದ ಕಠಿಣ ಕ್ರಮ ಜರುಗಿಸಬೇಕು ಎಂದು ಸಹಬಾಳ್ವೆ, ಉಡುಪಿ ಜಿಲ್ಲೆ ಒತ್ತಾಯಿಸಿದೆ.
ಮುಸ್ಲಿಮ್ ಮಹಿಳೆಯರೂ ಸೇರಿದಂತೆ, ಭಾರತದ ಮಹಿಳೆಯರನ್ನು ಹೀನಾಯವಾಗಿ ಅವಮಾನಿಸುವಂತಹ ಮಾತುಗಳನ್ನು ಆಡಿರುವ ಪ್ರಭಾಕರ್ ಭಟ್, ಅಲ್ಪ ಸಂಖ್ಯಾತ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಸಲುವಾಗಿ ವಾಸ್ತವಕ್ಕೆ ದೂರವಾದ ಕಲ್ಪಿತ ವಿಚಾರಗಳನ್ನು ಉದ್ರೇಕಕಾರಕವಾಗಿ ಹರಿಯಬಿಟ್ಟಿದ್ದಾರೆ. ಸಂವಿಧಾನಿಕ ಅಧಿಕಾರ ವಹಿಸಿಕೊಂಡಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯ ಮೇಲೆ ಸುಳ್ಳು ಆರೋಪಗಳ ಮೂಲಕ ದೂಷಣೆ ಮಾಡಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯವನ್ನು ತುಚ್ಛೀಕರಿಸುವ ಅಸಂವಿಧಾನಿಕ ದೂಷಣೆ ಮಾಡಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಂವಿಧಾನಬಾಹಿರ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಪ್ರಭಾಕರ್ ಭಟ್ ಮೇಲೆ ಕಠಿಣ ಕ್ರಮವನ್ನು ಸ್ವವಿವೇಚನೆಯಿಂದ ಜರುಗಿಸಬೇಕು ಎಂದು ಸಹಬಾಳ್ವೆ, ಉಡುಪಿ ಜಿಲ್ಲಾ ಸಂಚಾಲಕ ಸಮಿತಿಯ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.