ಬಿಸಿರೋಡ್, ಡಿ.27: ಮಂಡ್ಯದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ನಿಂದಿಸಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸುವಂತೆ ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿಮ್ ರಾಜ್ಯ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಮಾತನಾಡಿ, ಕರಾವಳಿಯ ಬಿಜೆಪಿ ಸಂಘಪರಿವಾರ ಹಾಗೂ ನಾಗರಿಕರಿಂದ ತಿರಸ್ಕರಿಸಲ್ಪಟ್ಟ ಕಲ್ಲಡ್ಕ ಭಟ್ ದೂರದ ಮಂಡ್ಯದಲ್ಲಿ ಹೋಗಿ ಅಲ್ಲಿ ಶಾಂತಿ ಸೌಹಾರ್ದತೆಯನ್ನು ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ. ಜನರು ಇವರ ಮಾತಿಗೆ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು.
ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಮಾತನಾಡಿ, ಪ್ರಭಾಕರ್ ಭಟ್ಟರೆ ನೀವು ಇಂತಹ ಭಾಷಣಗಳನ್ನು ಮಾಡುವುದನ್ನು ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಿಟ್ಟಿ ಭಾಗ್ಯಗಳನ್ನು ಕೊಡುವ ಮೊದಲು ಇಂತಹ ಭಟ್ಟರನ್ನು ಹತೋಟಿಯಲ್ಲಿ ಡಬೇಕು. ಅದು ಸಾಧ್ಯವಾಗುವುದಿಲ್ಲ ಎಂದಾದರೆ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿಬಿಡಿ ಎಂದರು.
ಸಾಹಿತಿ ಮಿಸ್ರಿಯಾ ಲುಕ್ಮಾನ್ ಅಡ್ಯಾರ್ ಮಾತನಾಡಿ, ಬಾಯಿ ಬಿಟ್ಟರೆ ಪಾಕಿಸ್ತಾನಕ್ಕೆ ಹೋಗಿ ಎಂದು ಮಾತನಾಡುವ ಪ್ರಭಾಕರ್ ಭಟ್ ನೀನು ಯಾವ ಸ್ಮಶಾನಕ್ಕೆ ಹೋಗ್ತೀಯಾ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ. ನಾವು ಐದು ಹೊತ್ತು ನಮಾಝ್ ಮಾಡಿ ನಾವು ಹುಟ್ಟಿದ ಮಣ್ಣನ್ನು ಚುಂಬಿಸುತ್ತೇವೆ. ನಾವು ಇಲ್ಲಿಯೇ ಹುಟ್ಟಿ, ಇಲ್ಲಿಯೆ ಜೀವಿಸಿ ಇಲ್ಲಿಯೇ ಮರಣ ಹೊಂದಲು ಆಶಿಸುವವರು. ನಮಗೆ ನಿಮ್ಮ ದೇಶಪ್ರೇಮದ ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದು ಖಾರವಾಗಿ ನುಡಿದರು.
ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ ಹಾಗೂ ಪ್ರ.ಕಾರ್ಯದರ್ಶಿ ನಿಶಾ ವಾಮಂಜೂರು ಮಾತನಾಡಿ ಪ್ರಭಾಕರ್ ಭಟ್ ಬಂಧನಕ್ಕೆ ಆಗ್ರಹಿಸಿದರು.
ಪ್ರತಿಭಟನಾಕಾರರು ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಪ್ರಭಾಕರ್ ಭಟ್ ಹಾಗೂ ಅವರನ್ನು ಬಂಧಿಸಲು ಹಿಂದೇಟು ಹಾಕುತ್ತಿರುವ ಪೋಲಿಸ್ ಇಲಾಖೆ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯೆ ಶಾಹಿದಾ ತಸ್ನೀಂ ಸೇರಿದಂತೆ ಹಲವು ಜಿಲ್ಲಾ ನಾಯಕಿಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.