ಮಂಗಳೂರು: ಕಾಂಗ್ರೆಸ್ಸಿಗರು ನಿಜವಾದ ರಾಮಭಕ್ತರಾಗಿದ್ದು, ನಮಗೆ ಎಲ್ಲ ಸಮಾಜ, ಧರ್ಮದ ಬಗ್ಗೆ ಅಪಾರ ಗೌರವ ಇದೆ. ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಅಯೋಧ್ಯೆ ವಿಚಾರದಲ್ಲಿ ಹೈಕಮಾಂಡ್ ನಮಗೆ ಮಾರ್ಗದರ್ಶನ ಕೊಟ್ಟಿದ್ದರಲ್ಲಿ ತಪ್ಪೇನಿದೆ? ನಾವೆಲ್ಲಾ ಹೈಕಮಾಂಡ್ ಹೇಳಿರುವುದನ್ನೇ ಪಾಲಿಸುತ್ತಿದ್ದೇವೆ. ದೇವರು ಮತ್ತು ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಜೆಪಿಗರ ಕೆಟ್ಟ ಚಾಳಿಯಾಗಿದೆ. ಈಗ ರಾಮನನ್ನು ತೆಗೊಂಡಿದ್ದಾರೆ. ಆದರೆ ರಾಮನ ನಿಜವಾದ ಭಕ್ತರು ನಾವು. ಮಂದಿರ ಉದ್ಘಾಟನೆಗೆ ಕರೆಯದಿದ್ದರೂ ಇಲ್ಲಿಂದಲೇ ರಾಮನನ್ನು ನಂಬುತ್ತೇವೆ. ನಾನು ಕೂಡ ಒರಿಜಿನಲ್ ಹಿಂದೂ ಎಂದು ಮಧು ಬಂಗಾರಪ್ಪ ಹೇಳಿದರು.
ಹಿಂದೂ, ಹಿಂದೂ ಎಂದು ಹೇಳಿಕೊಂಡು ಹೋದರೆ ಸಾಲದು. ಎಲ್ಲಾ ಧರ್ಮವನ್ನೂ ಗೌರವಿಸಬೇಕು. ಹಿಂದೂ ಎನ್ನುತ್ತಾ ಕರಾವಳಿ ಭಾಗದಲ್ಲಿ ಶಾಂತಿ ಕದಡಿರುವುದನ್ನು ಜನತೆ ನೋಡಿದೆ. ಮತ ಬ್ಯಾಂಕ್ಗಾಗಿ ಹಿಂದುತ್ವ ಮಾಡುವ ಕೆಲಸ ಬಿಜೆಪಿಗರದ್ದಾಗಿದೆ ಎಂದ ಸಚಿವ ಮಧು ಬಂಗಾರಪ್ಪ ಅವಕಾಶ ಸಿಕ್ಕರೆ ನಾನು ಅಯೋಧ್ಯೆಗೆ ಮಾತ್ರವಲ್ಲ ಮಸೀದಿ, ಚರ್ಚ್ಗೂ ಹೋಗುತ್ತೇನೆ. ಆದರೆ ಬಂಗಾರಪ್ಪ ಅವರ ಮಗನಾಗಿ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿ ದೇವರ ಹೆಸರಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದರು.
ನಳಿನ್ ಕುಮಾರ್ ರಾಜೀನಾಮೆ ನೀಡಲಿ: ನಾವು ಗ್ಯಾರಂಟಿ ಕೊಡ್ತೀವಿ ಎಂದಾಗ ರಾಜ್ಯದ ಜನರು ಅಧಿಕಾರ ಕೊಟ್ಟರು. ಸಂಸದ ನಳಿನ್ ಕುಮಾರ್ ಕಟೀಲ್ ಚರಂಡಿ, ಕಾಲುವೆ ನೋಡಬೇಡಿ, ಹೊಡಿಬಡಿ ಎಂದರು. ಅವತ್ತು ನಳಿನ್ ನನ್ನ ರಾಜೀ ನಾಮೆ ಕೇಳಿದ್ದರು, ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ಕೊಡಲಿ ಎಂದು ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದರು.
*ಬಿಜೆಪಿ ಸೋಲಿಗೆ ನಳಿನ್ ಕಾರಣ: ರಾಜ್ಯದಲ್ಲಿ ಬಿಜೆಪಿ ಸೋಲಿಗೆ ನಳಿನ್ ಕಾರಣ. ಬಂಗಾರಪ್ಪಕೊಟ್ಟ ಭಿಕ್ಷೆಯಲ್ಲಿ ನಳಿನ್ ಅಧಿಕಾರ ಪಡೆದಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಸಾವಿನಲ್ಲಿ ರಾಜಕೀಯ ಮಾಡುತ್ತಿ ದ್ದಾರೆ. ಬಂಗಾರಪ್ಪ ಹೆಸರಿನಲ್ಲಿ ನಳಿನ್ ಇಲ್ಲಿ ಸಂಸದರಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಸಂಸದರ ವಿರುದ್ಧ ಧಿಕ್ಕಾರ ಕೂಗಿದ್ದು ಕಾಂಗ್ರೆಸ್ನವರಲ್ಲ. ಬಿಜೆಪಿ, ಬಜರಂಗದಳ ಮತ್ತು ವಿಎಚ್ಪಿ ಕಾರ್ಯಕರ್ತರು ಸೇರಿ ನಳಿನ್ರ ಕಾರು ಅಲುಗಾಡಿಸಿದ್ದರು ಎಂಬುದು ನಳಿನ್ಗೆ ನೆನಪಿರಲಿ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು.
*ನಳಿನ್ ಮತ್ತೆ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ನಾನೇ ಇಲ್ಲಿಗೆ ಬರುತ್ತೇನೆ. ನಾನು ಯಾರ ಮೇಲೂ ವೈಯಕ್ತಿಕವಾಗಿ ಹೋಗಲ್ಲ. ಆದರೆ ನಳಿನ್ ನನ್ನ ರಾಜೀನಾಮೆ ಕೇಳಿದ್ದರು. ಅದಕ್ಕಾಗಿ ಅವರನ್ನು ಸೋಲಿಸಲೇಬೇಕಿದೆ. ನಳಿನ್ ಇಲ್ಲಿ ಹಿಂದುತ್ವ ಮತ್ತು ಭಾವನಾತ್ಮಕವಾಗಿ ಗೆದ್ದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಶೂನ್ಯ. ಮೋದಿ ಹೆಸರು ಹೇಳಿದ್ದನ್ನು ಬಿಟ್ಟರೆ ಅವರು ಬೇರೆ ಏನು ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
*ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಉಸ್ತುವಾರಿ ಸಚಿವರೇ ಹೊಣೆ ಎಂಬ ಹೈಕಮಾಂಡ್ ಎಚ್ಚರಿಕೆಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ ಹೈಕಮಾಂಡ್ ಹೇಳಿದ್ದರಲ್ಲಿ ತಪ್ಪಿಲ್ಲ. ಮತ್ತೆ ಅಧಿಕಾರ ಪುಕ್ಸಟ್ಟೆ ಬರುತ್ತಾ? ಸುಮ್ಮನೆ ಪ್ರಚಾರಕ್ಕೆ ಹೋಗಿ ಬಂದರೆ ಆಗುತ್ತಾ? ಜವಾಬ್ದಾರಿ ವಹಿಸಬೇಕು. ಹೊಣೆ ಹೊರಬೇಕು ಎಂದರು.
*ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯ ಜವಾಬ್ದಾರಿ ಹೈಕಮಾಂಡ್ ನನಗೆ ವಹಿಸಿಕೊ ಟ್ಟಿದೆ. ಅದರಂತೆ ನನ್ನ ಕೆಲಸ ಮಾಡಿದ್ದೇನೆ. ಮುಂದಿನದ್ದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.