ಹೊಸದಿಲ್ಲಿ : ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಪಾಕ್-ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಕಾಂಗ್ರೆಸ್ ಆಗ್ರಹಿಸಿದೆ.
ಒಬ್ಬ ವ್ಯಕ್ತಿ ʼಪಾಕಿಸ್ತಾನ್ ಝಿಂದಾಬಾದ್ʼ ಎಂದು ಹೇಳುತ್ತಿರುವಂತೆ ಕೇಳಿಸುವುದು ಹಾಗೂ ಇನ್ನೊಬ್ಬ ಆತನನ್ನು ಸುಮ್ಮನಾಗಿಸಲು ಯತ್ನಿಸುತ್ತಿರುವ ವೀಡಿಯೊವೊಂದನ್ನು ಕೇಂದ್ರ ಸಚಿವರು ಶೇರ್ ಮಾಡಿದ್ದರು.
ಆದರೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಶೇರ್ ಮಾಡಿದ ವೀಡಿಯೊದಲ್ಲಿ ಜನರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್ ಸಂಸದ ಸಯ್ಯದ್ ನಾಸಿರ್ ಹುಸೇನ್ ಅವರನ್ನು ಬೆಂಬಲಿಸಿ ಹಾಗೂ ಕಾಂಗ್ರೆಸ್ ಪಾರ್ಟಿ ಝಿಂದಾಬಾದ್ ಎಂದು ಘೋಷಣೆ ಕೂಗುವುದು ಕೇಳಿಸುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಸದನದಲ್ಲಿ ಪಾಕ್ ಪರ ಘೋಷಣೆಗಳು ನಿಜವಾಗಿಯೂ ಕೂಗಿದ್ದರೆ ಅಂತಹವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ ಎಂದರು. “ಸ್ವಲ್ಪ ಗೊಂದಲವಿದೆ… ಘೊಷಣೆಗಳು ನಾಸಿರ್ ಸಾಬ್ ಝಿಂದಾಬಾದ್ ಅಥವಾ ಪಾಕಿಸ್ತಾನ್ ಝಿಂದಾಬಾದ್ ಎಂಬುದೇ ಎಂದು ಸರಿಯಾಗಿ ತಿಳಿಯಬೇಕು”, ಎಂದು ಅವರು ಹೇಳಿದರು.
“ಸುಳ್ಳು ಸುದ್ದಿ ಹರಡುವುದಕ್ಕಾಗಿ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಡವೇ? ಐಟಿ ಸಚಿವರಾಗಿ ಅವರು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಾರೆಂಬುದು ನಾಚಿಕೆಗೇಡು,” ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.