ಸುರತ್ಕಲ್, ಡಿ.27: ಕಾನ ಜನತಾಕಾಲನಿಯ ಸರಕಾರಿ ಶಾಲೆ ಉಳಿಸಲು ನಡೆಯುತ್ತಿರುವ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿದೆ.
ಖಾಸಗಿ ಭೂ ಮಾಲಕ ಎನ್ನಲಾದ ಹೇಮಂತ್ ಶೆಟ್ಟಿ ಎಂಬವರು ಸಿವಿಲ್ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದ್ದು, ತನ್ನ ಜಮೀನಿಗೆ ಅಕ್ರಮ ಪ್ರವೇಶ, ಕಾಮಗಾರಿಗೆ ತೊಂದರೆ ನೀಡಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕಾನ ಜನತಾಕಾಲನಿಯ ಸರಕಾರಿ ಶಾಲೆ ಉಳಸಿ ಹೋರಾಟ ಸಮಿತಿಯ ಸಂಚಾಲಕರಾದ ಬಿ.ಕೆ. ಇಮ್ತಿಯಾಝ್, ಸಹ ಸಂಚಾಲಕರಾಗಿರುವ ಉಮರ್ ಫಾರೂಕ್, ವಾರಿಜಾ ಸಾಲ್ಯಾನ್, ಮುಹಮ್ಮದ್ ಅಶ್ರಫ್, ಶಬನಾ ಸೇರಿದಂತೆ ಒಟ್ಟು 7 ಮಂದಿಯ ವಿರುದ್ಧ ಖಾಸಗಿ ಭೂ ಮಾಲಕ ಎನ್ನಲಾದ ಹೇಮಂತ್ ಶೆಟ್ಟಿ ಖಾಸಗಿ ದಾವೆ ಹೂಡಿದ್ದರು.
ದೂರು ಸ್ವೀಕರಿಸಿ ಪುರಸ್ಕರಿಸಿದ ನ್ಯಾಯಾಲಯವು ಜ.27ರಂದು 11ಗಂಟೆಗೆ ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಹಾಜರಿದ್ದು, ಸ್ಪಷ್ಟೀಕರಣ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.
“ಹೋರಾಟಗಾರರ ವಿರುದ್ಧ ಕೇಸುಗಳನ್ನು ದಾಖಲಿಸಿ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಿರಿಯರ ಪರಿಶ್ರಮದಿಂದ ಮಂಜೂರುಗೊಂಡ ಸರಕಾರಿ ಶಾಲೆ 27ವರ್ಷಗಳಿಂದ ನಡೆಯುತ್ತಿದೆ. ಶಾಲೆಯ ಆವರಣ ಗೋಡೆಯೊಳಗೆ ನಾವು ಮುಂದೆಯೂ ನಡೆದಾಡುತ್ತೇವೆ. ಬಡವರಿಗಾಗಿ ಶಾಲೆ ಉಳಿಸಿಕೊಡುವ ಹೋರಾಟವನ್ನು ಬದ್ಧತೆಯಿಂದ ಮುನ್ನಡೆಸುತ್ತೇವೆ. ದೇಶದ ಕಾನೂನನ್ನು ಗೌರವಿಸುತ್ತೇವೆ. ಸುಳ್ಳು ಕೇಸುಗಳಿಗೆ ನ್ಯಾಯ ದೇಗುಲದಲ್ಲೇ ನ್ಯಾಯ ಪಡೆಯುತ್ತೇವೆ”.
– ಬಿ.ಕೆ ಇಮ್ತಿಯಾಝ್
ಸಂಚಾಲಕರು, ಸರಕಾರಿ ಉಳಿಸಿ ಹೋರಾಟ ಸಮಿತಿ ಕಾನ-ಕಟ್ಲ ಜನತಾಕಾಲನಿ