ಕುಂದಾಪುರ: ವಿಶೇಷ ಮಕ್ಕಳಲ್ಲಿರುವ ಪ್ರತಿಭೆ, ಆಸಕ್ತಿಯನ್ನು ಗುರುತಿಸಿ ಬೆಳೆಸುವ ಕಾರ್ಯಕ್ರಮ ಈ ವೇದಿಕೆ ಮೂಲಕ ಅನಾವರಣ ಗೊಳ್ಳುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮ. ವಿಶೇಷ ಮಕ್ಕಳ ಪ್ರತಿಭೆ ಗುರುತಿಸಿ, ಅದನ್ನು ಪೋಷಿಸುವ ಕಾರ್ಯ ಎಲ್ಲೆಡೆ ಆಗಲಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದ್ದಾರೆ.
ಶನಿವಾರ ಇಲ್ಲಿನ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಫಸ್ಟ್ ಸ್ಟೆಪ್, ಲೇಡೀಸ್ ಫಿಟ್ನೆಸ್ ಡ್ಯಾನ್ಸ್ ಸ್ಟುಡಿಯೋ ಕುಂದಾಪುರ ಹಾಗೂ ಕಾವಲು ಸಮಿತಿ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ವಿಶೇಷ ಮಕ್ಕಳ ಪ್ರತಿಭೆಗಳ ಅನಾವರಣಕ್ಕಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪರ್ಧೆ ‘ಹೆಜ್ಜೆ ಸಂಭ್ರಮ’ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕಮಲಶಿಲೆಯ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು. ಫಸ್ಟ್ ಸ್ಟೆಪ್ ಲೇಡಿಸ್ ಫಿಟ್ನೆಸ್ ಮತ್ತು ಡಾನ್ಸ್ ಕುಂದಾಪುರದ ಸ್ಥಾಪಕಿ ಅಕ್ಷತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷೆ ಡಾ.ಸೋನಿ ಕೋಸ್ಟಾ ಮಾತನಾಡಿದರು.
ಉದ್ಯಮಿಗಳಾದ ಅಜಯ್ ಪಿ. ಶೆಟ್ಟಿ, ಶಿವ ಆರ್. ಪೂಜಾರಿ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಆಶಾ ಕರ್ವಾಲೋ, ಮಿಸ್ಟರ್ ಆಂಡ್ ಮಿಸ್ಸೆಸ್ ಖ್ಯಾತಿಯ ಸ್ನೇಹ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ವಿವಿದೆಡೆಗಳಿಂದ ಆಗಮಿಸಿದ ವಿಶೇಷ ಮಕ್ಕಳಿಗೆ ಡ್ಯಾನ್ಸ್ ಶೋ, ಫ್ಯಾಷನ್ ಶೋ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆರ್ಜೆ ಪ್ರಸನ್ನ ಸ್ವಾಗತಿಸಿ, ನಿರೂಪಿಸಿದರು.