ಇಂಫಾಲ: ಮಣಿಪುರದಲ್ಲಿರುವ ಕುಕಿ-ರೆ ಬಂಡುಕೋರ ಗುಂಪುಗಳ ವಿರುದ್ಧದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಒಪ್ಪಂದವನ್ನು ರದ್ದುಪಡಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವೊಂದನ್ನು ರಾಜ್ಯ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ.
ಈ ಯುದ್ಧ ವಿರಾಮ ಒಪ್ಪಂದಕ್ಕೆ 2008ರಲ್ಲಿ ಕೇಂದ್ರ ಸರಕಾರ, ಮಣಿಪುರ ಸರಕಾರ ಹಾಗೂ 24 ಕುಕಿ ಬಂಡುಕೋರ ಸಂಘಟನೆಗಳನ್ನು ಪ್ರತಿನಿಧಿಸುವ ಎರಡು ಗುಂಪುಗಳಾದ ಕುಕಿ ನ್ಯಾಶನಲ್ ಆರ್ಗನೈಸೇಶನ್ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ ಗಳು ಸಹಿ ಹಾಕಿವೆ. ಒಪ್ಪಂದವನ್ನು ಪ್ರತಿ ವರ್ಷ ನವೀಕರಿಸಬೇಕಾಗಿದ್ದು, ಅದರ ವಾರ್ಷಿಕ ಅವಧಿ ಗುರುವಾರ ಮುಕ್ತಾಯಗೊಂಡಿದೆ.
ವಲಯಕ್ಕೆ ಶಾಂತಿ ಮತ್ತು ಭದ್ರತೆಯನ್ನು ಮರಳಿಸುವ ಉದ್ದೇಶದಿಂದ ಕಾರ್ಯಾಚರಣೆ ಸ್ಥಗಿತ ಒಪ್ಪಂದವನ್ನು ನವೀಕರಿಸದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಹೇಳಿದ್ದಾರೆ.
ಆದರೆ ಈ ನಿರ್ಣಯವನ್ನು ಕುಕಿ-ರೆ- ಹಮರ್ ಸಮುದಾಯಗಳ 10 ಶಾಸಕರು ವಿರೋಧಿಸಿದ್ದಾರೆ. ನಿರ್ಣಯ ಅಂಗೀಕಾರಗೊಳ್ಳುವಾಗ ಅವರು ಸದನದಲ್ಲಿರಲಿಲ್ಲ.
‘‘ನಮ್ಮ ಸಮುದಾಯದ ಬಗ್ಗೆ ಹೊಂದಿರುವ ಪೂರ್ವಾಗ್ರಹ, ಪಕ್ಷಪಾತ ಮತ್ತು ದ್ವೇಷದಿಂದಾಗಿ ರೂಪಿಸಲಾಗಿರುವ ಈ ಏಕಪಕ್ಷೀಯ ನಿರ್ಣಯಕ್ಕೆ’’ ಕುಕಿ ಶಾಸಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.