ಬೆಂಗಳೂರು:
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ (ಆರ್ ಜಿಯುಹೆಚ್ಎಸ್) ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಾಂಗ ನಿರತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಸಲುವಾಗಿ ವಿವಿ ಸ್ವಾಧಿನದಲ್ಲಿರುವ ಕೆಂಗೇರಿ ಸಮೀಪದ ಭೀಮನಕೊಪ್ಪ ಗ್ರಾಮದ 50 ಎಕರೆ ಜಮೀನಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ||ಎಸ್.ಸಚ್ಚಿದಾನಂದ ತಿಳಿಸಿದರು.
ವಿವಿಯ ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳಿಗೆ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಂಗೇರಿ ಸಮೀಪದ ಭೀಮನಕೊಪ್ಪ ಗ್ರಾಮದ 50 ಎಕರೆ ಭೂಮಿಯಲ್ಲಿ ಮೊದಲನೆ ಹಂತದಲ್ಲಿ ತರಬೇತಿ ಮತ್ತು ಸಂಶೋಧನಾ ಕೇಂದ್ರಗಳನ್ನು ನಿರ್ಮಿಸಲಾಗುವುದು. ಎರಡನೇ ಅಂತದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಿಸಿದರು. ಈ ಸಂಬಂಧ ಸಮಗ್ರ ನೀಲಿನಕ್ಷೆಯನ್ನು ಸಿದ್ಧಗೊಳಿಸಲು ಉದ್ದೇಶಿಸಲಾಗಿದ್ದು, ರಾಜ್ಯ ಸರ್ಕಾರ ಹಾಗೂ ವಿವಿ ಸಿಂಡಿಕೇಟ್ ಸದಸ್ಯರ ಅನುಮೋದನೆ ಪಡೆದ ಬಳಿಕ ಈ ಯೋಜನೆಯನ್ನು ಕಾರ್ಯಗೊಳಿಸಲಾಗುವುದು ಎಂದು ಉಪಕುಲಪತಿ ಮಾಹಿತಿ ನೀಡಿದರು.
ವಿವಿಯ ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆ ಹಾಗೂ ದೈಹಿಕ ಕ್ಷಮತೆಗೆ ಒತ್ತು ನೀಡಲು ರಾಜ್ಯದ 4 ಪ್ರಾದೇಶಿಕ ಕೇಂದ್ರಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮಂಗಳೂರಿನಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಳಿಸಲಾಗಿದೆ. ಒಂದೆರಡು ವರ್ಷಗಳಲ್ಲಿ ಈ ತರಬೇತಿ ಕೇಂದ್ರದ ನಿರ್ಮಾಣಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಕ್ರೀಡಾ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ ಕಾಳಜಿ ಪೌಸ್ಟಿಕ ಆಹಾರದ ಕುರಿತು ಮಾಹಿತಿ ಹಾಗೂ ತರಬೇತಿ ನೀಡುವ ಸಂಬಂಧ ರಾಜ್ಯ ಸರ್ಕಾರದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಜೊತೆ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ ಎಂದು ಉಪಕುಲಪತಿ ಈ ಸಂಧರ್ಭದಲ್ಲಿ ತಿಳಿಸಿದರು.