ಕುಂದಾಪುರ: ದಲಿತರು, ಶೋಷಿತ ಸಮುದಾಯದ ಶೋಚನೀಯ ಬದುಕು ಬದಲಾಯಿಸಲು ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದ ಕಲ್ಪನೆಗಳನ್ನು ಬದಿಗೊತ್ತಿ ಕೆಲವು ಅಧಿಕಾರಿಗಳು ದಮನಿತರನ್ನು ಅಸಡ್ಡೆ ಮಾಡುತ್ತಿರುವುದು ಸರಿಯಲ್ಲ. ಕೊರ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಉಳಿಗಮಾನ್ಯ ಪದ್ಧತಿ, ಪಾಳೆಗಾರಿಕೆ ಜೀವಂತವಾಗಿರುವುದು ಕಂಡುಬರುತ್ತಿ ದೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಘಟನಾ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಆರೋಪಿಸಿದ್ದಾರೆ.
ಇತ್ತೀಚೆಗೆ ಅಧಿಕೃತವಾಗಿ ಕರೆದ ನಿಗದಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಗ್ರಾಮಸಭೆ ರದ್ದುಗೊಳಿಸಿದ ಕೊರ್ಗಿ ಗ್ರಾಪಂ ಬರ್ಕಾಸ್ತು ಗೊಳಿಸುವಂತೆ ಹಾಗೂ ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಕೊರ್ಗಿ ಗ್ರಾಪಂ ಎದುರು ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ಗ್ರಾಪಂ ವ್ಯಾಪ್ತಿಯಲ್ಲಿ 56 ದಲಿತ ಕುಟುಂಬವಿದ್ದು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಕಾರಣವಾಗಿದೆ. ಸ್ಮಶಾನಕ್ಕೆ ಜಾಗ ಕಾಯ್ದಿರಿಸಲಾಗದ ಹೊಣೆಗೇಡಿ ಪಂಚಾಯತ್ ಇದಾಗಿದೆ. ಡಿ.27ರಂದು ದಲಿತ ಸಮುದಾಯದ ವಿಶೇಷ ಸಭೆ ಕರೆದ ಬಳಿಕ ಅದೇ ದಿನ ವಿಕಸಿತ ಭಾರತ ಕಾರ್ಯಕ್ರಮ ನಡೆಸಿ ದಲಿತರ ಗ್ರಾಮಸಭೆ ಮೊಟಕುಗೊಳಿಸಿದರು ಎಂದು ಅವರು ದೂರಿದರು.
ಈ ರೀತಿ ಅಸಡ್ಡೆ ತೋರಿ ದಲಿತರ ಸ್ವಾಭಿಮಾನಕ್ಕೆ ಘಾಸಿ ಮಾಡುವುದು ಸರಿಯಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ರಾಜಕೀಯ ಹಸ್ತಕ್ಷೇಪಕ್ಕೊಳ ಗಾಗುತ್ತಿದ್ದು ದಲಿತರು ಇಂತಹ ಅವಮಾನ ಸಹಿಸುವುದಿಲ್ಲ. ಅನ್ಯಾಯದ ವಿರುದ್ಧ ಧ್ವನಿಯೆ ತ್ತಲು ಹೋದವರನ್ನು ಗ್ರಾಪಂ ನಕ್ಸಲರಂತೆ ಕಾಣಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಪಾಳೆಗಾರಿಕೆ ಪದ್ಧತಿ ಸರಿಪಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಇದು ಸಾಂಕೇತಿಕ ಹೋರಾಟವಾಗಿದ್ದು ಮುಂದಿನ ದಿನದಲ್ಲಿ ಎಲ್ಲಾ ದಲಿತ ವಿರೋಧಿ ಪಂಚಾಯತಿಗಳಿಗೆ ಎಚ್ಚರಿಕೆ ಕರೆ ಗಂಟೆಯಾಗಿದೆ ಎಂದರು.
ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಮಾತನಾಡಿ, ಕೊರ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಪಾಳೆಗಾರಿಕೆ ನಡೆಯುತ್ತಿರುವುದು ಕಂಡುಬರುತ್ತಿದೆ. ಇಲ್ಲಿ ಹತ್ತು ಹಲವು ಜ್ವಲಂತ ಸಮಸ್ಯೆ ಕಾಡುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿದ್ದೆಯಲ್ಲಿದ್ದಾರೆ. ಎಸ್ಸಿ-ಎಸ್ಟಿ ನಿಧಿ ದುರುಪಯೋಗವಾಗುತ್ತಿದೆ. ಮೂಲನಿವಾಸಿಗರಿಗೆ ಮೂಲಸೌಕರ್ಯ ಒದಗಿಸಲಾಗದೆ ದಲಿತರನ್ನು ಕಡೆಗಣಿ ಸುವವರು ವಿಕಸಿತ ಭಾರತ ಮಾಡಲು ಹೊರಟಿದ್ದಾರೋ ವಿಕೃತ ಭಾರತ ಮಾಡಲು ಹೊರಟಿದ್ದಾರೋ ಎಂಬುದು ಪ್ರಶ್ನೆಯಾಗಿದೆ. ದಲಿತ, ಶೋಷಿತರ ಹಕ್ಕುಗಳನ್ನು ಪಡೆಯಲು ಕಾನೂನಾತ್ಮಕವಾಗಿ ಉಘ್ರ ಹೋರಾಟ ಮಾಡುವುದು ಅನಿವಾರ್ಯ ಎಂದರು.
ದಸಂಸ ವಿವಿಧ ಗ್ರಾಮ ಶಾಖೆಗಳ ಪದಾಧಿಕಾರಿಗಳಾದ ಚಂದ್ರ ಉಳ್ಳೂರು, ಸುರೇಶ್ ಮೂಡುಬಗೆ, ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ರಾಜು ಕೊರ್ಗಿ, ಅಣ್ಣಪ್ಪ ಬೆಟ್ಟಿನಮನೆ, ಭಾಸ್ಕರ ಕಿರಗಾವ, ಗೋವಿಂದ ಹಳೆಗೆರೆ, ರಮೇಶ ನಾಡಗುಡ್ಡೆಯಂಗಡಿ, ಶ್ರೀಕಾಂತ ಹಿಜಾಣ, ಹುಲಿಯ ಹೊಸ್ಮಠ, ದಿನೇಶ್ ಹೊಸ್ಮಠ, ಚಂದ್ರ ಹೊಸ್ಮಠ, ಚಂದ್ರ ಕೊರ್ಗಿ, ಕೃಷ್ಣ ಕೊರ್ಗಿ, ಶೇಖರ್ ಕೊರ್ಗಿ, ಮಾಧವ, ಉಮೇಶ, ಪ್ರಭಾಕರ್ ಬಿ., ಪ್ರವೀಣ್ ಕುಮಾರ್ ಬಿ. ಅಮಾಸೆಬೈಲು, ಸ್ಥಳೀಯರಾದ ದುರ್ಗಿ ಕೊರ್ಗಿ, ಲಕ್ಷ್ಮೀ, ಚಂದು, ಮುದ್ದು ಮೊದಲಾದವರು ಉಪಸ್ಥಿತರಿದ್ದರು.
ಸಮಸ್ಯೆ ಈಡೇರಿಕೆಗೆ ಆಗ್ರಹಿಸಿ ಮನವಿ
ಕುಂದಾಪುರ ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ವಿ. ರಾವ್ ಅವರಿಗೆ ೧೫ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ದಸಂಸ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಸ್ಥಳೀಯ ದಲಿತ ಸಮುದಾಯದ ಮಂದಿ ಕಲುಷಿತ ಕುಡಿಯುವ ನೀರು, ಸ್ಕಾಲರ್ ಶಿಪ್, ಸವಲತ್ತು ವಿತರಣೆಯಲ್ಲಿ ಲೋಪ ಮೊದಲಾದ ಹಲವು ಸಮಸ್ಯೆಗಳ ಬಗ್ಗೆ ಅವಲತ್ತುಕೊಂಡರು. ಸಮಸ್ಯೆಗಳ ನಿವಾರಣೆಗೆ ಕಾನೂನಿನಡಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ಅಧಿಕಾರಿ ನೀಡಿದರು. ಕೊರ್ಗಿ ಗ್ರಾ.ಪಂ ಅಧ್ಯಕ್ಷೆ ಉಮಾವತಿ ಶೆಟ್ಟಿ, ಪಿಡಿಒ ಸುಧಾಕರ್ ಶೆಟ್ಟಿ, ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ್ ಗೌಡ ಹಾಜರಿದ್ದರು.
ದಲಿತರ ಕುಂದುಕೊರತೆ ಸಭೆ ಮೊಟಕುಗೊಳಿಸಿದ ಕೊರ್ಗಿ ಗ್ರಾಪಂ ಆಡಳಿತ ವ್ಯವಸ್ಥೆ ಸಂವಿಧಾನ ಬದ್ಧವಾಗಿದೆಯೋ ಪಾಳೆಗಾರಿಕೆ ವ್ಯವಸ್ಥೆಯಲ್ಲಿದೆಯೋ ಎಂಬುದು ಪ್ರಶ್ನೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದಲಿತ ಸಮು ದಾಯದ ಪರವಾದ ಇಚ್ಚಾಶಕ್ತಿಯಿದ್ದರೆ ಇಂತಹ ಸರ್ವಾಧಿಕಾರಿ ಧೋರಣೆ ಪ್ರವೃತ್ತಿ ನಡೆಯುತ್ತಿರಲಿಲ್ಲ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಆರೋಪಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಊರಲ್ಲಿ ದಲಿತರಿಗಾದ ಅವಮಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಚಿಕೆಗೇಡು. ದಲಿತರ ಬಗ್ಗೆ ಸ್ಥಳಿಯಾಡಳಿತಕ್ಕೆ ಇಚ್ಚಾಶಕ್ತಿ ಇಲ್ಲವಾಗಿದ್ದು ಈ ಅನ್ಯಾಯದ ವಿರುದ್ದ ನ್ಯಾಯ ಯಾರಲ್ಲಿ ಕೇಳಬೇಕು ತಿಳಿಯುತ್ತಿಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆಯುತ್ತೇವೆ ಎಂದು ಅವರು ತಿಳಿಸಿದರು.