ಕೋಡಿ: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ (MIEF)ಯ ವತಿಯಿಂದ ಉಡುಪಿ ಝೋನಿನ ಕುಂದಾಪುರ ವಲಯದ (ರಾಮ್ಸನ್ ಸ್ಕೂಲ್ ಕಂಡ್ಲೂರ್, ಸೈಂಟ್ ಜೋಸೆಫ್ ಹೈ ಸ್ಕೂಲ್ ಕುಂದಾಪುರ, ಸೈಂಟ್ ಮೇರೀಸ್ ಸ್ಕೂಲ್ ಕುಂದಾಪುರ, ಸರಕಾರಿ ಪ್ರೌಢ ಶಾಲೆ ಬಸ್ರೂರು, ಎಸ್.ಎಲ್.ಬಿ.ಎಂ.ಆರ್.ಕೆ.ಎಚ್. ಸರಕಾರಿ ಪ್ರೌಢ ಶಾಲೆ ಬೀಜಾಡಿ, ಹಾಜಿ ಕೆ. ಮೊಹಿದ್ದೀನ್ ಸ್ಮಾರಕ ಅನುದಾನಿತ ಪ್ರೌಢ ಶಾಲೆ ಕೋಡಿ, ಝಿಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರು, ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ , ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕೋಡಿ) ವಿದ್ಯಾ ಸಂಸ್ಥೆಗಳ 375 ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವು ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕೋಡಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ ಡಯಟ್ ಉಡುಪಿ, ಡಾ.ಅಶೋಕ್ ಕಾಮತ್ ಅವರು ಉದ್ಘಾಟಿಸುವುದರ ಮೂಲಕ “ಮಾಡುವ ಕೆಲಸವನ್ನು ಮೊದಲ ಬಾರಿಗೆ ಚೆನ್ನಾಗಿ ಮಾಡು” ಎನ್ನುವ ವಿಶಿಷ್ಟ ಆಲೋಚನೆಯನ್ನು ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟುವಂತೆ ಪರೀಕ್ಷೆಯ ಸಿದ್ಧತೆಯ ಕುರಿತಾದ ಕಿವಿ ಮಾತನ್ನು ಹೇಳಿದರು.
ವಿಶೇಷವಾಗಿ 215 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗು 160 ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಸಭೆಗೆ ವಿಶೇಷ ಮೆರುಗನ್ನು ತಂದರು.
ಅತಿಥಿಗಳಾಗಿ ಆಗಮಿಸಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಅಬೂಬಕರ್ ಸಿದ್ದಿಕ್ ಬ್ಯಾರಿಯವರು ಭಾಗವಹಿಸಿ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮತ್ತೋರ್ವ ಟ್ರಸ್ಟಿ ಡಾ. ಆಸಿಫ್ ಬ್ಯಾರಿ ಅವರು “ಕಠಿಣ ಪರಿಶ್ರಮ ಉಜ್ವಲ ಭವಿಷ್ಯಕ್ಕೆ ದಾರಿ” ಎನ್ನುವ ಮಾತನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಪರೀಕ್ಷೆ ಎದುರಿಸುವ ವಿಧಿ ವಿಧಾನಗಳು ಹಾಗೂ ವಿಶೇಷವಾಗಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಸರಳ ಕಲಿಕಾ ಕಲೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತುದಾರರಾದ ಪ್ರೊ. ರಾಜೇಂದ್ರ ಭಟ್ ಅವರು ಕಾರ್ಯಾಗಾರ ನೆರವೇರಿಸಿದರು.
ಮೀಫ್ ಉಡುಪಿ ಝೋನ್ ಉಪಾಧ್ಯಕ್ಷರಾದ ಶಬೀಹ್ ಅಹ್ಮದ್ ಕಾಝಿ, ಮೀಫ್ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಅನ್ವರ್ ಹುಸೇನ್ ಗೂಡಿನಬಳಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬ್ಯಾರಿಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿ ಜನಿಫರ್ ಲೂಯಿಸ್ ಕಾರ್ಯಕ್ರಮವನ್ನು ನಿರೂಪಿಸಿ, ಅಫ್ ಶೀನ್ ತಾಜ್ ವಂದಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ವಹಿಸಿದ್ದರು.