Home Uncategorized ಕ್ರಿಸ್ಮಸ್ ಶಾಂತಿ ಸಾರುವ ಹಬ್ಬ: ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

ಕ್ರಿಸ್ಮಸ್ ಶಾಂತಿ ಸಾರುವ ಹಬ್ಬ: ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

22
0

ಉಡುಪಿ, ಡಿ.16: ಕ್ರಿಸ್ತ ಜಯಂತಿ ಹಬ್ಬವು ಶಾಂತಿಯನ್ನು ಸಾರುತ್ತದೆ. ಶಾಂತಿಯ ಸಾಧನವಾಗಲು, ಶಾಂತಿಯ ದೂತರಾ ಗಲು ನಮ್ಮನ್ನು ಪ್ರೇರೇಪಿಸುತ್ತದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನುಮನಗಳಲ್ಲಿ ಪ್ರಜ್ವಲಿಸಬೇಕಾದರೆ ನಾವು ಕ್ರಿಸ್ತರಂತೆ ಪ್ರೀತಿ ಸ್ವರೂಪರಾಗಿ ಸೇವಾಮನೋಭಾವ ದಿಂದ ನಿಸ್ವಾರ್ಥಿಗಳಾಗಬೇಕು ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾದ ಸೌಹಾರ್ದ ಕ್ರಿಸ್ಮಸ್ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಎರಡು ಸಾವಿರ ವರುಷಗಳ ಹಿಂದೆಯೇ ಜನಿಸಿದ ಯೇಸು ದೇವರೇ ಪ್ರೀತಿ ಯೆಂದು ಸಾರಿದರು. ದೇವರು ನಮ್ಮ ಮಧ್ಯೆ ಇದ್ದಾರೆ ಎಂದು ತೋರಿಸಿದರು. ದೇವರ ಪ್ರೀತಿ ಪಾತ್ರರಾಗಬೇಕಾದರೆ ದೀನತಾಭಾವ ಅತ್ಯಗತ್ಯ ಎಂದು ಬೋಧಿಸಿದರು. ತನಗಾಗಿ ಏನನ್ನೂ ಹಿಡಿದಿಟ್ಟುಕೊಳ್ಳದೆ ಎಲ್ಲವನ್ನೂ ಧರೆಗೆ ಧಾರೆ ಎರೆಯುವುದೇ ಸ್ವಾರ್ಥ ರಹಿತ ಪ್ರೀತಿ. ದೇವರ ಈ ನಿಸ್ವಾರ್ಥ ಪ್ರೀತಿಯ ಕಥೆಯನ್ನು ಸಾರಿ ಹೇಳುವ ಮಹಾ ಸಂದರ್ಭವೇ ಕ್ರಿಸ್ಮಸ್ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯ ಅಬ್ದುಲ್ ಅಝಿಜ್ ಉದ್ಯಾವರ ಮಾತನಾಡಿ, ಸೌಹಾರ್ದತೆಯನ್ನು ಪ್ರೇರೆಪಿಸುವ ಇಂತಹ ಕಾರ್ಯಕ್ರಮಗಳು ಬರಡು ಭೂಮಿಯಲ್ಲಿ ಮಳೆನೀರಿನ ಸಿಂಚನವಾದಂತೆ ಭಾಸವಾಗುತ್ತದೆ. ಈ ಮೂಲಕ ಸಮಾಜದಲ್ಲಿ ಕೂಡು ಬಾಳುವಿಕೆಯಿಂದ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ಎಂ.ಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯಿ, ಪತ್ರಕರ್ತ ರಾದ ಶಶಿಧರ ಮಾಸ್ತಿಬೈಲು, ಮಹಮ್ಮದ್ ಷರೀಫ್, ನಝೀರ್ ಪೊಲ್ಯ, ಶ್ರೀಕಾಂತ ಹೆಮ್ಮಾಡಿ, ಜಸ್ಟೀನ್ ಎರೋಲ್ ಡಿಸಿಲ್ವಾ, ಸಮಾಜ ಸೇವಕರಾದ ಹಾಜಿ ಅಬ್ದುಲ್ಲಾ ಪರ್ಕಳ, ಆಯಿಷಾ ಭಾನು, ವಿಶು ಶೆಟ್ಟಿ ಅಂಬಲಪಾಡಿ, ಈಶ್ವರ್ ಮಲ್ಪೆ, ಮೇರಿ ಶ್ರೇಷ್ಠ, ಕ್ಲಾರೆನ್ಸ್ ಡಿಸೋಜ, ಹೆನ್ರಿ ಸಾಂತು ಮಾಯೆರ್, ರಾಜಕೀಯ ಕ್ಷೇತ್ರದಲ್ಲಿ ಅರುಣ್ ಫೆರ್ನಾಂಡಿಸ್, ವಿಲ್ಸನ್ ರೊಡ್ರಿಗಸ್, ಮೇರಿ ಮಸ್ಕರೇನ್ಹಸ್, ಜೋನ್ ಸಿಕ್ವೇರಾ ಹಾಗೂ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಮೇರಿ ಡಿಸೋಜ, ನಿಯೋಜಿತ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ವಾಲ್ಟರ್ ಸಿರಿಲ್ ಪಿಂಟೊ, ಆಲ್ಫೋನ್ಸ್ ಡಿಕೋಸ್ತಾ, ಮಾಧ್ಯಮ ಸಮಿತಿ ಸಂಚಾಲಕ ಮೈಕಲ್ ರೊಡ್ರಿಗಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಮೆಲ್ವಿನ್ ಅರಾನ್ಹಾ ಸ್ವಾಗತಿಸಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ ಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ ವಂದಿಸಿದರು. ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here