ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಲ್ಯಾಣ ಕರ್ನಾಟಕವನ್ನು ಗೆಲ್ಲಲು ಸಿಗುತ್ತಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಮೋದಿ, ಶಾ ಹಾಗೂ ನಡ್ಡಾ ಪದೇ ಪದೇ ಭೇಟಿ ನೀಡುತ್ತಿದ್ದಾರೆ .
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಲ್ಯಾಣ ಕರ್ನಾಟಕವನ್ನು ಗೆಲ್ಲಲು ಸಿಗುತ್ತಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಉದ್ಯಮ ಮತ್ತು ವಾಣಿಜ್ಯ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ, ಅನಂತರ ಮನೆ-ಮನೆ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ: ‘ಕರ್ನಾಟಕಕ್ಕೆ ಡಬಲ್ ಎಂಜಿನ್ ಸರ್ಕಾರ ಬೇಕಾ, ರಿವರ್ಸ್ ಗೇರ್ ಸರ್ಕಾರ ಬೇಕಾ ನೀವೇ ನಿರ್ಧರಿಸಿ’: ಅಮಿತ್ ಶಾ
ಬೀದರ್ ಮತ್ತು ಕಲಬುರಗಿಯ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಜೊತೆಯಲ್ಲಿ ಜನರ ಬಳಿಗೆ ಹೋಗುತ್ತಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿಯನ್ನು ವಿಶ್ವ ನಾಯಕ ಎಂದು ಒಪ್ಪಿಕೊಳ್ಳಲಾಗಿದೆ. ಅವರು ನಮ್ಮ ಕ್ಷೇತ್ರಕ್ಕೆ ಬಂದರೆ ನಮ್ಮ ಮೇಲೆ ಹಾಗೂ ಪಕ್ಷದ ಮೇಲೆ ಭಾರಿ ಪರಿಣಾಮ ಬೀರಲಿದೆ. ಅಮಿತ್ ಶಾ ಮತ್ತು ನಡ್ಡಾ ತಮ್ಮ ರಾಜಕೀಯ ಕಾರ್ಯತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಎಲ್ಲ ಅಂಶಗಳು ಬಿಜೆಪಿಯ ಗೆಲುವಿಗೆ ಕಾರಣವಾಗಲಿದೆ ಎಂದು ಚವಾಣ್ ತಿಳಿಸಿದ್ದಾರೆ.
ಆದರೆ ವಾಸ್ತವವಾಗಿ, ಬಿಜೆಪಿಯು ಈ ಭಾಗದಲ್ಲಿ ಖರ್ಗೆ ಪ್ರಭಾವ ತಗ್ಗಿಸಲು ಪ್ರಯತ್ನಿಸುತ್ತಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ಸುಮಾರು 1 ಲಕ್ಷ ಮತಗಳ ಅಂತರದಿಂದ ಖರ್ಗೆ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು.
ಮೋದಿ ತಮ್ಮ ತವರು ಕ್ಷೇತ್ರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಈ ವರ್ಷದ ಫೆಬ್ರವರಿಯಲ್ಲಿ ಖರ್ಗೆ ಮೇಲ್ಮನೆಯಲ್ಲಿ ಹೇಳಿದ್ದರು. ಸಂಸತ್ ಅಧಿವೇಶನ ನಡೆಯುತ್ತಿರುವಾಗಲೂ ಅವರು ನನ್ನ ಕ್ಷೇತ್ರಕ್ಕೆ ಹೋಗಿದ್ದರು ಎಂದು ಖರ್ಗೆ ಆರೋಪಿಸಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಲಿಂಗಾಯತ ಮಠಗಳ ಭೇಟಿ ಕೇವಲ ಶೋ-ಆಫ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಜನವರಿಯಿಂದ ಬಿಜೆಪಿಯ ಪ್ರಮುಖ ಮೂವರು ನಾಯಕರು ಬಹುತೇಕ ಪ್ರತಿ ತಿಂಗಳು ಬೀದರ್ ಮತ್ತು ಕಲಬುರಗಿಗೆ ಬಂದು ಹೋಗುತ್ತಿದ್ದಾರೆ. ಜನವರಿಯಲ್ಲಿ ಕಲಬುರಗಿಯಲ್ಲಿ ಲಂಬಾಣಿ ಸಮುದಾಯಕ್ಕೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದ್ದ ಮೋದಿ, ಈ ತಿಂಗಳಾಂತ್ಯಕ್ಕೆ ಬೀದರ್ಗೆ ಆಗಮಿಸಲಿದ್ದಾರೆ.
ಮಾರ್ಚ್ನಲ್ಲಿ, ಶಾ ಬೀದರ್ಗೆ ಎರಡು ಬಾರಿ ಭೇಟಿ ನೀಡಿದರು. ಮಾರ್ಚ್ 3 ರಂದು ವಿಜಯ್ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಲು ಹಾಗೂ ಮಾರ್ಚ್ 26 ರಂದು 103 ಅಡಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಗೋರಟಾ ಮೈದಾನದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮಾರಕವನ್ನು ಉದ್ಘಾಟಿಸಲು ಆಗಮಿಸಿದ್ದರು.
ಜನವರಿಯಲ್ಲಿ, ನಡ್ಡಾ ಅವರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಕಲಬುರಗಿಗೆ ಬಂದಿದ್ದರು. ಕಳೆದ ಶುಕ್ರವಾರ ಬೀದರ್ನಲ್ಲಿದ್ದರು.