Home Uncategorized ಗದಗ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ: ಮತ್ತೊಂದೆಡೆ ಮಠದಲ್ಲಿನ ಟ್ರೇಜರಿ ಸಮೇತ ದಾಖಲೆ, ಬಂಗಾರ ಕಳ್ಳತನ

ಗದಗ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ: ಮತ್ತೊಂದೆಡೆ ಮಠದಲ್ಲಿನ ಟ್ರೇಜರಿ ಸಮೇತ ದಾಖಲೆ, ಬಂಗಾರ ಕಳ್ಳತನ

27
0

ಗದಗ: ನಗರದ ಪ್ರತಿಷ್ಠಿತ ಶಿವಾನಂದ ಮಠದ(Gadag Shivanand Mutt) ಉತ್ತರಾಧಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳ ನಡುವೆ ಗುದ್ದಾಟ ನಡೆದಿದ್ರೆ, ಮತ್ತೊಂದೆಡೆ ಮಠದಲ್ಲಿನ ಟ್ರೇಜರಿ ಸಮೇತ ದಾಖಲೆ, ಬಂಗಾರ ಕಳ್ಳತನವಾಗಿದೆ. ಮಠದ ಕಿರಿಯಶ್ರೀ ಸದಾ ಶಿವಾನಂದ ಕೊಠಡಿಯಲ್ಲಿದ್ದ ಟ್ರೇಜರಿ ಸಮೇತ ದಾಖಲೆ ಪತ್ರ ಹಾಗೂ 25 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ.

ಈ ಬಗ್ಗೆ ಮಠದ ಕಿರಿಯ ಶ್ರೀ ಸದಾ ಶಿವಾನಂದ ಸ್ವಾಮೀಜಿ ಗದಗನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಹಾಗೂ ಸದಸ್ಯನ ವಿರುದ್ಧ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಒಂದೆಡೆ ಮಠದ ಕಿರಿಯ ಶ್ರೀಗಳ ಕೊಠಡಿಯಲ್ಲಿ ಕಳ್ಳತನವಾಗಿದ್ರೆ, ಮತ್ತೊಂದೆಡೆ ಮಠದ ಉತ್ತರಾಧಿಕಾರಿಕ್ಕಾಗಿ ದೊಡ್ಡ ಗಲಾಟೆ ನಡೆದಿದೆ.

ಶಿವಾನಂದ ಮಠದ ಸ್ವಾಮೀಜಿಗಳ ಗುದ್ದಾಟ

ಕಳಸಾಪುರ ರಸ್ತೆಯಲ್ಲಿರುವ ಶಿವಾನಂದ ಮಠಕ್ಕೆ ಉತ್ತರಾಧಿಕಾರಿಕ್ಕಾಗಿ ಗುದ್ದಾಟ ಶುರುವಾಗಿದೆ. ಮಠದ ಹಿರಿಯ ಶ್ರೀ ಅಭಿನವಶಿವಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸದಾಶಿವಾನಂದ ಸ್ವಾಮಿ ಭಕ್ತರ ನಡುವೆ ವಾಗ್ವಾದ ನಡೆದಿದ್ದು, ಕಿರಿಯ ಶ್ರೀಗಳನ್ನು ಒತ್ತಾಯ ಪೂರ್ವಕವಾಗಿ ಪೀಠದಿಂದ ಕೆಳಗಿಸಿದ್ದಾರೆ ಎಂದು ಭಕ್ತರು ಹಿರಿಯ ಶ್ರೀಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇದರಿಂದ ಮಠದ ಬಳಿ ಹಿರಿಯ ಶ್ರೀ ಹಾಗೂ ಕಿರಿಯ ಶ್ರೀಗಳ ಭಕ್ತರ ನಡುವೆ ವಾಗ್ವಾದ ನಡೆದಿದೆ.

ನೂರಾರು ಭಕ್ತರು ಜಮಾವಣೆಯಾಗಿದ್ದರಿಂದ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆಯಿಂದ ಮಠದ ಆವರಣದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಹಿರಿಯಶ್ರೀ ಪ್ರತಿಕ್ರಿಯೆ

ಇನ್ನು ಈ ಬಗ್ಗೆ ಹಿರಿಯಶ್ರೀ ಅಭಿನವಶಿವಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಸದಾಶಿವಾನಂದಶ್ರೀ(ಕಿರಿಯ ಸ್ವಾಮಿಜಿ) ಮಠದ ಸಂಪ್ರದಾಯದಂತೆ ನಡೆದುಕೊಂಡಿಲ್ಲ. ನನ್ನನ್ನ ಕೂಡಾ ಸರಿಯಾಗಿ ನೋಡಿಕೊಂಡಿಲ್ಲ. ನನ್ನ ಜೊತೆಗೆ ಮಾತನಾಡಿಲ್ಲ. ಮಠದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಉತ್ತರಾಧಿಕಾರಿ ಶ್ರೀಗಳನ್ನು ಪದಚ್ಯುತಿಗೊಳಿಸಲಾಗಿದೆ. ಸದಾಶಿವಾನಂದಶ್ರೀಗಳಿಂದ ಜೀವಬೆದರಿಕೆ ಇದೆ, ನನಗೆ ರಕ್ಷಣೆ ಬೇಕು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದರು.

ಈ ಮೊದಲು 2018ರ ಮೇ 25ರಂದು ಸದಾಶಿವಾನಂದ ಶ್ರೀಗಳನ್ನ (ಕಿರಿಯ ಸ್ವಾಮಿಜಿ) ಶಿವಾನಂದ ಮಠದ ಉತ್ತರಾಧಿಕಾರಿಯಾಗಿನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಸರಿಯಾಗಿ ನೋಡಿಕೊಳ್ಳಲುತ್ತಿಲ್ಲ ಎಂದು ಆರೋಪಿಸಿ ಸದಾಶಿವಾನಂದ ಶ್ರೀಗಳನ್ನು ಪೀಠಾಧಿಪತಿಯಿಂದ ಪದಚ್ಯುತಿಗೊಳಿಸಲಾಗಿದೆ.. ಅಲ್ಲದೇ ಹಿರಿಯ ಶ್ರೀ ಅಭಿನವಶಿವಾನಂದ ಸ್ವಾಮೀಜಿ ಅವರು ಕಳೆದ ನವೆಂಬರ್ 28ರಂದು ಗದಗ ಉಪನೋಂದಣಿ‌ ಕಚೇರಿಯಲ್ಲೂ ಸಹ ರದ್ದು ಮಾಡಿಸಿದ್ದಾರೆ. ಇದರಿಂದ ಕಿರಿಯ ಸ್ವಾಮೀಜಿಗಳ(ಸದಾಶಿವಾನಂದಶ್ರೀ) ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here