ಚೆನ್ನೈ: ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಲು ಗಾಂಧೀಜಿಯವರಿಗಿಂತ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಾರಣ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹೇಳಿದ್ದಾರೆ.
“ಗಾಂಧೀಜಿ ನೇತೃತ್ವದ ಭಾರತ ಸ್ವಾತಂತ್ರ್ಯ ಹೋರಾಟ 1942ರ ಬಳಿಕ ನಗಣ್ಯವಾಯಿತು. ನೇತಾಜಿ ಆ ಸಂದರ್ಭದಲ್ಲಿ ಇಲ್ಲದಿದ್ದರೆ, ಭಾರತ 1947ರಲ್ಲಿ ಸ್ವತಂತ್ರವಾಗುತ್ತಿರಲಿಲ್ಲ” ಎಂದು ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದ ನೇತಾಜಿಯವರ 127ನೇ ಜಯಂತಿ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.
ಎರಡನೇ ಮಹಾಯುದ್ಧ ಆರಂಭವಾದ ಬಳಿಕ, ಭಾರತದ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ ಹೋರಾಟ ಮೊನಚು ಕಳೆದುಕೊಂಡಿತು. ಮಹಾತ್ಮಾಗಾಂಧಿ ನೇತೃತ್ವದ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಗಮನಿಸಿದರೆ, 1942ರ ಬಳಿಕ, ಅದು ನಗಣ್ಯ; ಏನೂ ನಡೆಯಲಿಲ್ಲ. ನಮ್ಮ ನಡುವೆಯೇ ಕಚ್ಚಾಟದಲ್ಲಿ ನಾವು ತೊಡಗಿದ್ದೆವು. ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಪ್ರತ್ಯೇಕ ತಾಯ್ನಾಡಿಗೆ ಹೋರಾಡುತ್ತಿತ್ತು. ಆದ್ದರಿಂದ ನಾವು ವಿಭಜನೆಗೊಂಡೆವು. ಬ್ರಿಟಿಷರಿಗೆ ಅದು ಖುಷಿ ನೀಡಿತು. 1942ರ ಬಳಿಕ ಭಾರತವನ್ನು ಆಳ್ವಿಕೆ ಮಾಡಲು ಬ್ರಿಟಿಷರಿಗೆ ಯಾವ ಪ್ರತಿರೋಧವೂ ಇರಲಿಲ್ಲ. ನಾವು ಸಹಕರಿಸುವುದಿಲ್ಲ ಎಂದು ಹೇಳುತ್ತಲೇ ಬಂದೆವು. ಸಹಕಾರ ನೀಡಬೇಕಿದ್ದರೆ ಸ್ವಾತಂತ್ರ್ಯದ ಭರವಸೆ ನೀಡಬೇಕು ಎಂದು ಕೇಳಿದೆವು. ಅದಕ್ಕೆ ಅವರು ಒಪ್ಪಲಿಲ್ಲ. ಆದರೆ ಅವರಿಗೆ ಯಾವ ಸಮಸ್ಯೆಯೂ ಆಗಲಿಲ್ಲ ಎನ್ನುವುದು ವಾಸ್ತವ. ಭಾರತದಲ್ಲಿ ಅವರು ಇನ್ನಷ್ಟು ವರ್ಷ ಇರುತ್ತಿದ್ದರು” ಎಂದು ವಿಶ್ಲೇಷಿಸಿದರು.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮಹಿಳಾ ಬೆಟಾಲಿಯನ್ ಹೊಂದಿರಬೇಕು ಎಂಬ ನೇತಾಜಿಯವರ ದೃಷ್ಟಿಕೋನ ಶ್ಲಾಘನೀಯ. ಆದರೆ ಸೇನೆಯಲ್ಲಿ ಯುದ್ಧ ಪಾತ್ರವನ್ನು ನಿರ್ವಹಿಸಲು ಮಹಿಳೆಯರನ್ನು ತೊಡಗಿಸಿಕೊಳ್ಳಲು ಭಾರತಕ್ಕೆ ಏಳು ದಶಕ ಬೇಕಾಯಿತು ಎಂದು ಹೇಳಿದರು.
ಭಾರತ ಸ್ವಾತಂತ್ರ್ಯ ಗಳಿಸಿದ್ದಕ್ಕೆ ನಾವು ನೇತಾಜಿಯವರಿಗೆ ಚಿರಋಣಿಯಾಗಿರಬೇಕು ಎನ್ನುವುದು ವೈಭವೀಕರಣವಲ್ಲ. ಅಂಥ ಶ್ರೇಷ್ಠ ವ್ಯಕ್ತಿಯನ್ನು ದೇಶದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಅಂಚಿಗೆ ತಳ್ಳುವುದು ಕೃತಘ್ನತೆಯ ಪರಮಾವಧಿ. ಮಾತೃಭೂಮಿಗೆ ನೇತಾಜಿಯವರ ಕೊಡುಗೆಯ ಪರಂಪರೆಯ ಹೆಮ್ಮೆಯನ್ನು ನಾವು ಮರಳಿ ಪಡೆಯಬೇಕು” ಎಂದು ಅಭಿಪ್ರಾಯಪಟ್ಟರು.