ಉಡುಪಿ, ಜ.3: ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಭಕ್ತರು ತೆರಳುವಾಗ ಮತ್ತೊಂದು ಗೋದ್ರಾದಂಥ ಘಟನೆ ನಡೆದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ರಾಮ ಮಂದಿರದ ಉದ್ಘಾಟನೆಗೆ ತೆರಳುವಾಗ ಮತ್ತೊಂದು ಗೋದ್ರಾದಂತಹ ಘಟನೆ ನಡೆಯಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರತಿ ಕ್ರಿಯೆ ನೀಡಿದರು.
ಈ ವಿಚಾರಕ್ಕೆ ಸಂಬಂಧಿಸಿ ನನ್ನ ಬಳಿ ಮಾಹಿತಿ ಇದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಆದುದರಿಂದ ಗೋದ್ರಾದಂಥ ಘಟನೆ ರಾಜ್ಯದಲ್ಲಿ ಅಥವಾ ದೇಶದಲ್ಲಿ ನಡೆದರೆ ಅದಕ್ಕೆ ನೇರವಾಗಿ ಕಾಂಗ್ರೆಸ್ ಕಾರಣವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಗಳು ಬಿ.ಕೆ.ಹರಿಪ್ರಸಾದ್ರನ್ನು ತನಿಖೆಗೆ ಒಳಪಡಿಸ ಬೇಕು ಎಂದು ಅವರು ಒತ್ತಾಯಿಸಿದರು.
ಈ ಹೇಳಿಕೆಯ ಹಿಂದೆ ಕಾಂಗ್ರೆಸ್ ಬಹುದೊಡ್ಡ ಪಿತೂರಿ ಮಾಡಿದೆ. 2002ರಲ್ಲಿ ಗೋದ್ರಾದಲ್ಲಿ ಭೋಗಿಗೆ ಬೆಂಕಿ ಹಚ್ಚಿದ ಘಟನೆ ಮತ್ತು ಶ್ರೀರಾಮ ಕಾಲ್ಪನಿಕ ಎನ್ನುವಂಥ ಕಾಂಗ್ರೆಸ್, ರಾಮಮಂದಿರ ಉದ್ಘಾಟನಾ ಸಮಯದಲ್ಲಿ ಗೋದ್ರಾದ ಘಟನೆ ಹೇಳುವ ಮೂಲಕ ಜನರಲ್ಲಿ ಭಯ ಮೂಡಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.