Home Uncategorized ಗ್ಯಾರಂಟಿ ಯೋಜನೆ ಬಗ್ಗೆ ಜಿಲ್ಲಾ ಮಟ್ಟದ ಸಮಾವೇಶ ಅಗತ್ಯ: ವಿ. ಸುದರ್ಶನ್

ಗ್ಯಾರಂಟಿ ಯೋಜನೆ ಬಗ್ಗೆ ಜಿಲ್ಲಾ ಮಟ್ಟದ ಸಮಾವೇಶ ಅಗತ್ಯ: ವಿ. ಸುದರ್ಶನ್

27
0

ಮಂಗಳೂರು, ಜ.2: ರಾಜ್ಯದಲ್ಲಿ ಬರಗಾಲ ತೀವ್ರ ಪರಿಣಾಮ ಬೀರಿದ ಸಂದರ್ಭ ಗ್ಯಾರಂಟಿ ಬಡವರ ಬದುಕಿಗೆ ಆಸರೆಯಾಗಿ ಹಾಹಾಕಾರ ಕಡಿಮೆ ಮಾಡಿದೆ. ಇದೀಗ ಮುಖ್ಯಮಂತ್ರಿಯವರು ಫಲಾನುಭವಿಗಳ ಜತೆ ಜಿಲ್ಲಾ ಮಟ್ಟದಲ್ಲಿ ಸಮಾವೇಶ ಮಾಡಬೇಕಿದೆ. ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಆದಾಗ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಬಲಪಡಿಸಲು ಸಾಧ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ. ಸುದರ್ಶನ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ದುರಾಡಳಿತದಿಂದ ಜನ ಬದಲಾವಣೆ ಬಯಸಿ ಕೈ ಅಧಿಕಾರಕ್ಕೆ ತಂದಿದ್ದಾರೆ. ಸರಕಾರ ಘೋಷಣೆಯಂತೆ ಗ್ಯಾರಂಟಿ ಅನುಷ್ಠಾನ ಪ್ರಾಮಾಣಿಕವಾಗಿ ಮಾಡಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದಾಗಿ ಸರಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿ. ಸುದರ್ಶನ್, ಹಿಂದಿನ ಬಿಜೆಪಿ ಸರಕಾರ ಕೊನೆಗೊಂಡಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆದರೆ ಅನುಭವಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಸರಕಾರ ಆಡಳಿತದ ಬಗ್ಗೆ ಗಮನ ಹರಿಸುತ್ತಿದೆ. ಸರಕಾರ ಆಡಳಿತಕ್ಕೆ ಬಂದು ಆರು ತಿಂಗಳಷ್ಟೇ ಆಗಿದ್ದು, ಬಹಳಷ್ಟು ಅಭಿವೃದ್ಧಿ ಕೆಲಸಗಳೂ ಆರಂಭವಾಗಿವೆ ಎಂದರು.

ಬಿಜೆಪಿ ಆಯೋಧ್ಯೆ ವಿಚಾರವನ್ನು ಮುಂದಿಟ್ಟು ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಕಾಂಗ್ರೆಸ್‌ನ ಪ್ರತಿ ತಂತ್ರಗಾರಿಕೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಎಂಬುದು ನಿಂತರ ನೀರಲ್ಲ. ಬದಲಾವಣೆ ನಿಯಮ. ಧಾರ್ಮಿಕ ವಿಚಾರಗಳನ್ನು ನಾವು ಗೌರವಿಸುತ್ತೇವೆ. ಅದರ ಜತೆಗೆ ಜನರ ಬದುಕಿನ ಸಮಸ್ಯೆಗಳು, ಸಂಕಷ್ಟಗಳನ್ನು ಪ್ರಶ್ನಿಸಬೇಕಿದೆ. ಆದರೆ ಕೇಂದ್ರ ಸರಕಾರದಿಂದ ಇದಕ್ಕೆ ಉತ್ತರ ಸಿಗುತ್ತಿಲ್ಲ. ಸಂಸತ್ತಿನಲ್ಲಿ 150 ಸಂಸದರನ್ನು ಹೊರಗೆ ಹಾಕಿ ಬಿಲ್ ಪಾಸ್ ಮಾಡುವುದೆಂದರೆ ಪ್ರಜಾಪ್ರಭುತ್ವದ ಮೇಲೆ ಎಷ್ಟು ಗೌರವ ಇದೆ ಎಂಬುದನ್ನು ತೋರ್ಪಡಿಸುತ್ತದೆ ಎಂದು ಸುದರ್ಶನ್ ಪ್ರತಿಕ್ರಿಯಿಸಿದರು.

ಅಯೋಧ್ಯೆಗೆ ಸಂಬಂಧಿಸಿ ರಾಜ್ಯದಲ್ಲಿ ಹಿಂದಿನ ಪ್ರಕರಣಗಳನ್ನು ಕೆದಕಲಾಗುತ್ತಿದೆ ಎಂಬುದಾಗಿ ವಿಪಕ್ಷ ನಾಯಕರ ವಿರೋಧದ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರು ಗೃಹ ಸಚಿವರಾಗಿದ್ದಾಗ ಕಡ್ಲೆಕಾಯಿ ತಿನ್ನುತ್ತಿದ್ದರೇ? ನ್ಯಾಯಾಲಯದ ತೀರ್ಮಾನ ಅಂತಿಮ. ಎರಡು ಸಲ ಸರಕಾರ ಮಾಡಿದವರಿಗೆ ಆ ಸಂದರ್ಭದಲ್ಲಿ ಇದರ ಬಗ್ಗೆ ಅರಿವಿರಲಿಲ್ಲವೇ? ರಾಜಕಾರಣಕ್ಕೆ ಮಾತ್ರ ಅಯೋಧ್ಯೆ ವಿಚಾರ ಬೇಕು ಅವರಿಗೆ. ಈ ಘಟನೆ ರಾಜಕೀಯವಾಗಿ ನೋಡುವ ಅಗತ್ಯವಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಇಬ್ರಾಹಿಂ ಕೋಡಿಜಾಲ್, ನೀರಜ್‌ಪಾಲ್, ಶುಭೋದಯ ಆಳ್ವ, ವಿಶ್ವಾಸ್ ಕುಮಾರ್ ದಾಸ್, ಲಾರೆನ್ಸ್ ಡಿಸೋಜಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.

 

ಬೆಳಗಾವಿ ಅಧಿವೇಶನದ 100ರ ಸಂಭ್ರಮ

1924ರಲ್ಲಿ ಎಐಸಿಸಿ ಅಧಿವೇಶನ ಬೆಳಗಾವಿಯಲ್ಲಿ ನಡೆದಾಗ ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ತತ್ವಗಳು ಜಗತ್ತಿಗೆ ಪ್ರಭಾವ ಬೀರಿವೆ. ಈ ವಿಚಾರ ಹೊಸ ತಲೆಮಾರಿಗೆ ತಲುಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿವೇಶನದ 100ನೆ ಸಂಭ್ರಮವನ್ನು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲು ಮಾತುಕತೆ ನಡೆಯುತ್ತಿದೆ. ಇದನ್ನು ಸರಕಾರ ಅಥವಾ ಪಕ್ಷದ ವತಿಯಿಂದ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಸುದರ್ಶನ್ ತಿಳಿಸಿದರು.

LEAVE A REPLY

Please enter your comment!
Please enter your name here