Home Uncategorized ಚನ್ನಪಟ್ಟಣ ಬೆಂಗಳೂರು ಆಗಲಿದೆ: ಡಿಸಿಎಂ ಡಿ. ಕೆ. ಶಿವಕುಮಾರ್

ಚನ್ನಪಟ್ಟಣ ಬೆಂಗಳೂರು ಆಗಲಿದೆ: ಡಿಸಿಎಂ ಡಿ. ಕೆ. ಶಿವಕುಮಾರ್

11
0

ಚನ್ನಪಟ್ಟಣ (ರಾಮನಗರ), ಜುಲೈ 3: ಚನ್ನಪಟ್ಟಣ ತಾಲ್ಲೂಕು ಡಿ.ಕೆ. ಶಿವಕುಮಾರ್ ಮುಂದಾಳತ್ವದಲ್ಲಿ ಬೆಂಗಳೂರು ಆಗಲಿದೆ. ಚನ್ನಪಟ್ಟಣಕ್ಕೆ ಹೊಸ ಚೈತನ್ಯ ತುಂಬಲು ನಾನು ಬಂದಿದ್ದೇನೆ” ಎಂದು ಡಿ ಸಿ ಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಚನ್ನಪಟ್ಟಣದ ಕೋಟೆ ಮಾರಮ್ಮ ದೇವಸ್ಥಾನದ ಆವರಣ ಮತ್ತು ಫರಾನ ಶಾಲೆಯ ಆವರಣದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಹಾಗೂ ನಂತರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಾವೆಲ್ಲ ಇದ್ದಿದ್ದು ಬೆಂಗಳೂರಿನಲ್ಲಿ, ಈಗಲೂ ಇರುವುದು ಬೆಂಗಳೂರಿನಲ್ಲಿ. ಇರುವ ಹೆಸರನ್ನು ನಾವೇಕೆ ಕಳೆದುಕೊಳ್ಳಬೇಕು. ಇನ್ನೆರಡು ದಿನ ಕಾಯಿರಿ” ಎಂದರು.

“ನಾವು ಎಲ್ಲಿಗೆ ಸೇರಿದವರು ಎಂಬ ಮಾಹಿತಿ ಬೇಕಾದರೆ ಪಠ್ಯ ಪುಸ್ತಕಗಳನ್ನು ತೆಗೆದುನೋಡಿ. ಹೊಸಕೋಟೆ, ದೇವನಹಳ್ಳಿ, ಮಾಗಡಿ, ಕನಕಪುರ ಹೀಗೆ ನಾವೆಲ್ಲ ಬೆಂಗಳೂರಿಗೆ ಸೇರಿದವರು” ಎಂದು ಪುನರುಚ್ಚರಿಸಿದರು.

ರಾಮನಗರ, ಚನ್ನಪಟ್ಟಣವನ್ನು ಅವಳಿ ನಗರಗಳನ್ನಾಗಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು ಎಂದು ಕೇಳಿದಾಗ “ಅವರು ಎರಡು ಬಾರಿ ಸಿಎಂ ಆಗಿದ್ದರು ಆಗ ಮಾಡಿದ್ರಾ? ನಾನು ಕೊಟ್ಟಮಾತನ್ನು ಮರೆಯುವವನಲ್ಲ. ಮಾತ್ನನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು.

ಚನ್ನಪಟ್ಟಣ ಕತ್ತಲಲ್ಲಿದೆ ಈ ಕ್ಷೇತ್ರವನ್ನು ಅಭಿವೃದ್ಧಿ ಪಟ್ಟಣ ಮಾಡಬೇಕು ಎಂದು ಇಲ್ಲಿನ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ದೀಪ ಹಚ್ಚಿದ್ದಾರೆ. ಅವರ ಕೈ ಬಲಪಡಿಸಲು ನಾನು ಬಂದಿದ್ದೇನೆ” ಎಂದರು

ನಮ್ಮವರನ್ನು ಶಾಸಕರನ್ನಾಗಿ ಮಾಡಿ “ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವ ಮಾತಿನ ಅರ್ಥವನ್ನು ಮಾಧ್ಯಮಗಳು ಉತ್ತಮವಾಗಿ ಬರೆದಿವೆ. ಮತದಾರರು ನಮ್ಮವರನ್ನು ಶಾಸಕರನ್ನಾಗಿ ಮಾಡಿ ನಮ್ಮ ಕೈ ಬಲಪಡಿಸಬೇಕು. ಆಗ ಈ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ನನಗೆ ಶಕ್ತಿ ಸಿಗುತ್ತದೆ” ಎಂದು ಮನವಿ ಮಾಡಿದರು.

“ಈಗಾಗಲೇ 9 ಕಡೆಗಳಲ್ಲಿ ಈ ರೀತಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಸರ್ಕಾರವನ್ನು ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸೇವೆ ಮಾಡುತ್ತಿದ್ದೇವೆ. ಎಲ್ಲಾ ಇಲಾಖೆ, ಪಾಲಿಕೆ, ಪಂಚಾಯ್ತಿ ಅಧಿಕಾರಿಗಳು ನಿಮ್ಮ ಸೇವೆಗೆ ಬಂದಿದ್ದಾರೆ. ಈ ಕಾರ್ಯಕ್ರಮದ ಬಳಿಕ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ” ಎಂದು ಹೇಳಿದರು.

“ನಿಮ್ಮ ಎಲ್ಲಾ ಸಮಸ್ಯೆಗಳನ್ನು ಒಂದೇ ಬಾರಿ ಸರಿಪಡಿಸುತ್ತೇನೆ ಎಂದು ಹೇಳುತ್ತಿಲ್ಲ. ನಿಮಗೆ ಆಗಿರುವ ಅನ್ಯಾಯವನ್ನು ಹಂತ ಹಂತವಾಗಿ ಕಾನೂನು ವ್ಯಾಪ್ತಿಯಲ್ಲಿ ಸರಿಪಡಿಸುತ್ತೇವೆ” ಎಂದರು.

“ಸಾವಿರಾರು ಮಂದಿ ಮನೆ, ನಿವೇಶನ, ಸಾಲ ಸೌಲಭ್ಯ, ಪಿಂಚಣಿ ಸಮಸ್ಯೆ, ಖಾತೆ, ಪೋಡಿ, ರಸ್ತೆ ದುರಸ್ತಿ, ಒಳ ಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ವಿಚಾರವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ, ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದರು.

ಸ್ವಯಂ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ ನೀಡಲಾಗುವುದು. ಎಲ್ಲಾ ಸಮುದಾಯಕ್ಕೂ ಸಮುದಾಯ ಭವನ, ಸ್ಮಶಾನ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು” ಎಂದು ಹೇಳಿದರು.

ಕನಕಪುರ ಮಾದರಿ ಇಲ್ಲಿಯೂ ಜಾರಿ “ಇಲ್ಲಿಯವರೆಗೂ ಯಾರೊಬ್ಬರೂ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳಿಲ್ಲ ಎಂದು ಭಾವಿಸುತ್ತೇನೆ. ಕನಕಪುರದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಿ ಸಾವಿರಾರು ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದೇನೆ. ಅನೇಕರು ನಿವೇಶನ ಹಾಗೂ ಮನೆಗಳಿಗೆ ಬೇಡಿಕೆ ಇಟ್ಟಿದ್ದೀರಿ. ಚನ್ನಪಟ್ಟಣದ ಟೌನ್ ಸುತ್ತಮುತ್ತ 40-50 ಎಕರೆ ಜಾಗದಲ್ಲಿ ನಿವೇಶನ ಮಾಡಿ ಅವುಗಳನ್ನು ಬಡವರಿಗೆ ನೀಡಲಾಗುವುದು. ಸರ್ಕಾರಿ ಜಮೀನು ಇಲ್ಲವಾದರೆ ಸರ್ಕಾರವೇ ಖಾಸಗಿ ಜಮೀನು ಖರೀದಿಸಿ ಲೇಔಟ್ ಮಾಡಿ ನಿವೇಶನ ಹಂಚಲಾಗುವುದು. ಇದೇ ರೀತಿ ಕನಕಪುರದಲ್ಲಿ 100 ಎಕರೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ” ಎಂದರು.

ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ ನಮ್ಮ ಸರ್ಕಾರ ಈಗಾಗಲೇ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ನಿಮ್ಮ ಮನೆ ಬೆಳಗಲು ಪ್ರತಿ ತಿಂಗಳು 200 ಯೂನಿಟ್ ವರೆಗೂ ಉಚಿತ ವಿದ್ಯುತ್. ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ. ಅನ್ನಭಾಗ್ಯ ಮೂಲಕ 5 ಕೆ.ಜಿ ಅಕ್ಕಿ, 5 ಕೆಜಿ ಅಕ್ಕಿಗೆ ಬದಲು ಹಣವನ್ನು ನೀಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ” ಎಂದರು.

ನಾನು ಯಾರು ಗೊತ್ತಾ ನಾನು ಯಾರು ಗೊತ್ತಿದೆಯೇ ಎಂದು ಸಭಿಕರನ್ನು ಡಿಸಿಎಂ ಶಿವಕುಮಾರ್ ಅವರು ಕೇಳಿದ ತಕ್ಷಣ “ನೀವು ಡಿ.ಕೆ.ಶಿವಕುಮಾರ್” ಎಂದು ಸಭಿಕರು ಹರ್ಷೋದ್ಗಾರ ಮಾಡಿದರು.

ಕಾರ್ಯಕ್ರಮದ ಮಧ್ಯೆ ಜೋರು ಮಳೆ ಬಂದಿದ್ದು ನೋಡಿ “ಮಳೆ ಇನ್ನೂ ಜೋರಾಗಿ ಬರಲಿ. ತಮಿಳುನಾಡಿನವರು ನೀರು ಕೊಡಿ ಎಂದು ಗಲಾಟೆ ಮಾಡುತ್ತಿದ್ದಾರೆ. ಬೋರ್ ವೆಲ್ ಅಲ್ಲಿ ನೀರು ಪಾತಾಳ ಸೇರಿದೆ. ಮಳೆ ಬಂದಷ್ಟು ಒಳ್ಳೆಯದು” ಎಂದು ಹೇಳಿದರು.

LEAVE A REPLY

Please enter your comment!
Please enter your name here