ಬಾಗಲಕೋಟೆ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಜನ ಕರ್ನಾಟಕಕ್ಕೆ ಸೇರುವ ಆಸೆಯನ್ನು ಹೊರ ಹಾಕಿದ್ದರು. ಈಗ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ 40 ಗ್ರಾಮಗಳ ಜನರು ಕರ್ನಾಟಕ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಹಾಜನ್ ಆಯೋಗದ ವರದಿಯಂತೆ ನಾವೂ ಕರ್ನಾಟಕಕ್ಕೆ ಸೇರ್ತೀವಿ ಎಂದು ಸ್ವಿಇಚ್ಛೆ ತಿಳಿಸಿದ್ದಾರೆ. ಇದರಿಂದ ತಮ್ಮ ನೆಲದಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.
5 ದಶಕದಿಂದ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಕುಡಿಯುವ ನೀರು, ಸುಸಜ್ಜಿತ ರಸ್ತೆ, ಕನ್ನಡ ಶಾಲೆಗಳಿಗೆ ಸೌಲಭ್ಯ ಸಿಕ್ಕಿಲ್ಲ. ಕನ್ನಡ ಮಾಧ್ಯಮದ ಮಕ್ಕಳಿಗೆ ಕನ್ನಡದ ಪಠ್ಯ ದೊರಕುತ್ತಿಲ್ಲ. ಮೂಲ ಸೌಕರ್ಯಕ್ಕೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ರೂ ಸ್ಪಂದಿಸಿಲ್ಲ. ಮಹಾರಾಷ್ಟ್ರ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು, ಕೂಡಲೇ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮಹಾಜನ್ ವರದಿಯಂತೆ ನಾವು ಕರ್ನಾಟಕಕ್ಕೆ ಹೋಗುತ್ತೇವೆ. ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡ್ತೇವೆ. ನಾವು ಕರ್ನಾಟಕಕ್ಕೆ ಸೇರಲು ತುಂಬಾ ಉತ್ಸುಕರಾಗಿದ್ದೇವೆ ಎಂದು ಅಕ್ಕಲಕೋಟ ತಾಲೂಕಿನ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಸೇರಲು ಮಹಾರಾಷ್ಟ್ರದಲ್ಲಿ ಹೆಚ್ಚಾದ ಹೋರಾಟ; ರಾಜ್ಯದ ಹೊಸ ನಕ್ಷೆ ಎಲ್ಲೆಡೆ ವೈರಲ್
ಮಹಾರಾಷ್ಟ್ರ ಕನ್ನಡಿಗರ ಬೆಂಬಲಕ್ಕೆ ನಿಂತ ಕರ್ನಾಟಕ ರಕ್ಷಣಾ ವೇದಿಕೆ
ಇನ್ನು ಮತ್ತೊಂದೆಡೆ ಮಹಾರಾಷ್ಟ್ರ ಕನ್ನಡಿಗರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಿಂತಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಬಾಲಗಾಂವ್ ಗ್ರಾಮಕ್ಕೆ ತೆರಳಿ ಅಲ್ಲಿನ ಕನ್ನಡಿಗರನ್ನು ಕರ್ನಾಟಕ ಸೇರುವಂತೆ ಆಹ್ವಾನಿಸಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡದಿಂದ ಕರವೇ ಕಾರ್ಯಕರ್ತರು ತೆರಳಿದ್ದು ಕಾಗವಾಡ ತಾಲೂಕು ಅಧ್ಯಕ್ಷ ಸಿದ್ದು ಒಡೆಯರ್ ನೇತೃತ್ವದಲ್ಲಿ ಅಲ್ಲಿಯ ಜನರನ್ನು ಭೇಟಿ ಮಾಡಿ ಭುವನೇಶ್ವರಿ ದೇವಿಯ ಫೋಟೋ ನೀಡಿ ಆಹ್ವಾನಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ