Home Uncategorized ಜನರ ಸಮಸ್ಯೆಗೆ ದನಿಯಾಗಲು ವಿಭಾಗ ಮಟ್ಟದಲ್ಲಿ ʼಜನಸ್ಪಂದನʼ ಕಾರ್ಯಕ್ರಮ: ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್

ಜನರ ಸಮಸ್ಯೆಗೆ ದನಿಯಾಗಲು ವಿಭಾಗ ಮಟ್ಟದಲ್ಲಿ ʼಜನಸ್ಪಂದನʼ ಕಾರ್ಯಕ್ರಮ: ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್

27
0

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಇತ್ತೀಚೆಗೆ ನಡೆದ ಸಿಎಂ ‘ಜನಸ್ಪಂದನ’ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿದ್ದು, ಜನಸ್ಪಂದನ ಕಾರ್ಯಕ್ರಮ ನಿರಂತರವಾಗಿ ಮುಂದುವರಿಸಬೇಕೆಂಬುದು ಸಿಎಂ ಸಿದ್ದರಾಮಯ್ಯರ ಆಕಾಂಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಜನಸ್ಪಂದನವನ್ನು ವಿಭಾಗಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಕುರಿತು ಪರಾಮರ್ಶೆ ಹಾಗೂ ಮೌಲ್ಯಮಾಪನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಸಿಎಂ ಬಳಿ ತಮ್ಮ ಅಹವಾಲುಗಳನ್ನು ಹೇಳಿಕೊಂಡರು.

ಸಿಎಂ ಸಿದ್ದರಾಮಯ್ಯ ಅವರು ಅತ್ಯಂತ ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ, ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದ್ದಾರೆ. ಜನಸ್ಪಂದನದಲ್ಲಿ ಬಂದಿರುವ ಅರ್ಜಿಗಳನ್ನು ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಅವುಗಳಿಗೆ ಹಿಂಬರಹ ಕೊಟ್ಟರೇ ಆಗುವುದಿಲ್ಲ. ನಾಡಿನ ಪ್ರಜೆಯೊಬ್ಬ ಸಿಎಂ ವರೆಗೆ ಬಂದಾಗ ಸಮಸ್ಯೆ ಬಗೆಹರಿಯಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

14,685 ಅರ್ಜಿಗಳಲ್ಲಿ ಈಗಾಗಲೇ 4,321 ಅರ್ಜಿ ವಿಲೇವಾರಿ

ಜನಸ್ಪಂದನ ಕಾರ್ಯಕ್ರಮದ ಯಶಸ್ಸಿನ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಇದಕ್ಕೆ ಸಾಂಸ್ಥಿಕ ರೂಪ ನೀಡಿ ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಬೇಕೆಂದು ಅಪೇಕ್ಷಿಸಿದ್ದಾರೆ. ಬರೀ ವಿಲೇವಾರಿ ಮಾಡಿ ಕೈ ತೊಳೆದುಕೊಳ್ಳದೇ ಗುಣಮಟ್ಟದ ವಿಲೇವಾರಿಗೆ ಒತ್ತು ಕೊಡಬೇಕು. ಬಂದಿರುವ 14,685 ಅರ್ಜಿಗಳಲ್ಲಿ ಈಗಾಗಲೇ 4,321 ಅರ್ಜಿ ವಿಲೇವಾರಿ ಮಾಡಲಾಗಿದ್ದು, ಉಳಿದವುಗಳನ್ನು ಆದ್ಯತೆ ಮೇರೆಗೆ ವಿಲೇವಾರಿಗೆ ಕ್ರಮವಹಿಸಬೇಕು. ಇಡೀ ದೇಶಕ್ಕೆ ಈ ಜನಸ್ಪಂದನ ಕಾರ್ಯಕ್ರಮ ಮಾದರಿಯಾಗಬೇಕು. ಇನ್ನಷ್ಟು ಹೆಚ್ಚಿನ ಗುಣಮಟ್ಟ ತರಬೇಕು ಎಂದು ಅವರು ಹೇಳಿದರು.

ಕಲಬುರಗಿಯಲ್ಲಿ ಮುಂದಿನ ಜನಸ್ಪಂದನ ನಡೆಸಲು ನಿರ್ಧರಿಸಲಾಗಿದೆ. ಜನಸ್ಪಂದನದಲ್ಲಿ ಬಂದಿರುವ ದೂರುಗಳಲ್ಲಿ ಅತಿಹೆಚ್ಚು ಕಂದಾಯ ಇಲಾಖೆಗೆ ಸೇರಿದವುಗಳಾಗಿವೆ. ಜಿಲ್ಲಾವಾರು ಬೆಂಗಳೂರು ನಗರ,ತುಮಕೂರು, ಮೈಸೂರು ಜಿಲ್ಲೆಗಳಿಂದ ಹೆಚ್ಚು ದೂರು ಸ್ವಿಕೃತವಾಗಿವೆ. ಇತ್ತೀಚಿಗೆ ನಡೆದ ಜನಸ್ಪಂದನದ ಯಶಸ್ವಿಯ ಶ್ರೇಯಸ್ಸು ಎಲ್ಲರಿಗೂ ಸಲ್ಲುತ್ತದೆ. ವಿಧಾನಸೌಧದ ಆವರಣದಲ್ಲಿ ನಡೆದ ಜನಸ್ಪಂದನದ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ಜನಸ್ಪಂದನ ನಡೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಅವರು ಹೇಳಿದರು.

ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಡಾ.ಕೆ.ವಿ. ತ್ರೀಲೋಕಚಂದ್ರ, ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಸೇರಿದಂತೆ ವಿವಿಧ ಇಲಾಖೆಗಳ ಆಯುಕ್ತರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here