Home ಕರ್ನಾಟಕ ‘ಜಲಸಂಗಮ’ದ ಕನಸು ಹೊತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಿ.ಗಂಗಪ್ಪ ನಿಧನ

‘ಜಲಸಂಗಮ’ದ ಕನಸು ಹೊತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಿ.ಗಂಗಪ್ಪ ನಿಧನ

26
0

ಬೆಂಗಳೂರು : ಉತ್ತರ ಭಾರತದ ಪ್ರವಾಹ ಹಾಗೂ ದಕ್ಷಿಣ ಭಾರತದಲ್ಲಿನ ಬರ ಪರಿಸ್ಥಿತಿಯನ್ನು ಶಾಶ್ವತವಾಗಿ ಬಗೆಹರಿಸಲು ನದಿಗಳ ಜೋಡಣೆ ಎಂಬ ‘ಜಲಸಂಗಮ’ದ ಕನಸು ಹೊತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಿ.ಗಂಗಪ್ಪ(84) ಗುರುವಾರ ನಗರದ ಡಾರ‍್ಸ್ ಕಾಲನಿಯಲ್ಲಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಾಳಕೆರೆ ಗ್ರಾಮದಲ್ಲಿ 1939ರ ಜು.12ರಂದು ಜನಿಸಿದ ಗಂಗಪ್ಪ, ಬಡಕನಹಳ್ಳಿ ಪ್ರಾಥಮಿಕ ಶಾಲೆ ಮತ್ತು ಮಧುಗಿರಿಯ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಪಡೆದರು. ಆನಂತರ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದರು.

ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಗುಮಾಸ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಗಂಗಪ್ಪ, ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಂಗ್ಲಿಷ್ ಕಲಿತರು ಮತ್ತು 1967ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಗಂಗಪ್ಪ ಅವರನ್ನು ತಮಿಳುನಾಡಿನ ಕೇಡರ್ ಆಗಿ ನಿಯೋಜಿಸಲಾಯಿತು.

ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿ ಜನಮನ್ನಣೆಗಳಿಸಿದ್ದ ಗಂಗಪ್ಪ, ತಂಜಾವೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ 1980ರಲ್ಲಿ ಬೃಹದೇಶ್ವರ ದೇವಸ್ಥಾನದಲ್ಲಿ ಕುಂಬಾಭಿಷೇಕವನ್ನು ನಡೆಸಿದ್ದು ಅವರ ಗಮನಾರ್ಹ ಕೊಡುಗೆಯಾಗಿದೆ. ಈ ಕುಂಭಾಭಿಷೇಕವನ್ನು 177 ವರ್ಷಗಳ ನಂತರ ನಡೆಸಲಾಗಿತ್ತು. (ಕೊನೆಯ ಕುಂಬಾಭಿಷೇಕವು ಮರಾಠ ರಾಜ ಎರಡನೇ ಸರ್ಫೋಜಿ ಆಳ್ವಿಕೆಯಲ್ಲಿ ನಡೆಸಲಾಗಿತ್ತು).

ವೆಲ್ಲೂರಿನ ಜಿಲ್ಲಾಧಿಕಾರಿಯಾಗಿದ್ದಾಗ 400 ವರ್ಷಗಳಿಂದ ಪೂಜೆಯಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದೇವಾಲಯದಲ್ಲಿ ಜಲಕಂಠೇಶ್ವರ ವಿಗ್ರಹವನ್ನು ಸ್ಥಾಪಿಸಿದರು. ಇಂದು ಆ ದೇವಾಲಯದಲ್ಲಿ ಎರಡು ಚಿನ್ನದ ತೇರುಗಳು ಇವೆ. 1987ರಲ್ಲಿ ಅವರು ಸ್ವಯಂ ನಿವೃತ್ತಿ ತೆಗೆದುಕೊಂಡರು. ಗಂಗಪ್ಪ ಅವರು ಪತ್ನಿ ಜಯಮ್ಮ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಉತ್ತರ ಹಾಗೂ ದಕ್ಷಿಣ ಭಾರತದ ನದಿಗಳ ಪರಸ್ಪರ ಸಂಪರ್ಕಕ್ಕಾಗಿ ಜಲಸಂಗಮ ಎಂಬ ಯೋಜನೆ ರೂಪಿಸಿ, ನೀಲಿನಕ್ಷೆಯನ್ನು ಸಿದ್ಧಪಡಿಸಿದ್ದರು. ಆದರೆ, ಯಾಕೋ ಅವರ ಕನಸು ನನಸು ಆಗಲೆ ಇಲ್ಲ. ಅವರ ಅಂತ್ಯಕ್ರಿಯೆಯನ್ನು ನಾಳೆ(ಶುಕ್ರವಾರ) ಬೆಳಗ್ಗೆ 9 ಗಂಟೆಗೆ ಹೆಬ್ಬಾಳದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಅವರ ಪುತ್ರಿ ಐಆರ್‌ಎಸ್ ಅಧಿಕಾರಿ ಸುನಂದಾ ‘ವಾರ್ತಾಭಾರತಿ’ಗೆ ತಿಳಿಸಿದರು.

LEAVE A REPLY

Please enter your comment!
Please enter your name here