ಉಡುಪಿ, ಜ.5: ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಜಿಲ್ಲೆಯ ವಿವಿಧ ಬೀಚ್ಗಳಲ್ಲಿ ಜೀವ ರಕ್ಷಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಆಯ್ಕೆ ಪ್ರಕ್ರಿಯೆ ಜ.8ರಂದು ನಡೆಯಲಿದೆ. ತರಬೇತಿ ಬಳಿಕ ಇವರನ್ನು ನೇಮಕ ಮಾಡಿಕೊಳ್ಳ ಲಾಗುವುದು.
ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್ನಲ್ಲಿ ಇಬ್ಬರು, ತ್ರಾಸಿ- ಮರವಂತೆ ಬೀಚ್ನಲ್ಲಿ ಮೂವರು, ಮಲ್ಪೆ ಸಮೀಪದ ಆಸರೆ ಬೀಚ್ನಲ್ಲಿ ಇಬ್ಬರು, ಮಲ್ಪೆ ಬೀಚ್ನಲ್ಲಿ ನಾಲ್ವರು, ಸೈಂಟ್ ಮೇರೀಸ್ ಐಲ್ಯಾಂಡ್ನಲ್ಲಿ ಮೂವರು, ಕಾಪು ಬೀಚ್ನಲ್ಲಿ ಇಬ್ಬರು, ಪಡುಬಿದ್ರಿ ಮುಖ್ಯ ಬೀಚ್ನಲ್ಲಿ ಇಬ್ಬರು ಹಾಗೂ ಕುಂದಾಪುರ ಕೋಡಿ ಬೀಚ್ನಲ್ಲಿ ಇಬ್ಬರು ಸೇರಿದಂತೆ ಒಟ್ಟು 20 ಮಂದಿ ಜೀವ ರಕ್ಷಕ ಸಿಬ್ಬಂದಿಗಳನ್ನು ಇಲಾಖೆಯ ವತಿಯಿಂದ ಜೀವ ರಕ್ಷಕ ತರಬೇತಿ ನೀಡಿ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನದನ್ವಯ ನೇಮಕ ಮಾಡಿಕೊಳ್ಳಲಾಗುವುದು.
ಇವರಿಗೆ ಮಾಸಿಕ ವೇತನ 17,672 ರೂ (ವೇತನ 13,264ರೂ, ಪಿ.ಎಫ್ 3800 ರೂ, ಇಎಸ್ಐ-608 ರೂ.) ಗಳೊಂದಿಗೆ ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.
ತರಬೇತಿಯಲ್ಲಿ ಭಾಗವಹಿಸುವ ಮುಂಚಿತವಾಗಿ ಆಯ್ಕೆ ಪ್ರಕ್ರಿಯೆ ಜನವರಿ 8ರಂದು ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತರಿರುವ 18 ರಿಂದ 35 ವರ್ಷದೊಳಗಿನ ಒಂದು ಕಿ.ಮೀ. ಓಟ ಮತ್ತು 400ಮೀ. ಈಜುವ ಸಾಮರ್ಥ್ಯ ಹೊಂದಿರುವ ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ ಅಂದು ಬೆಳಗ್ಗೆ 9:00ರಿಂದ 11:00 ಗಂಟೆ ಒಳಗೆ ನಗರದ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದ ಈಜುಕೊಳ ಇಲ್ಲಿ ಹಾಜರಾಗಿ ಹೆಸರು ನೊಂದಾಯಿಸಿ ಕೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್ ಎರಡನೇ ಮಹಡಿ, ಕೊಠಡಿ ಸಂಖ್ಯೆ 303, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820 -2574868ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.